ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡ ನಂತರ ಪರೋಕ್ಷವಾಗಿ ಮುಸ್ಲಿಂ ಸಮುದಾಯದ ಮತಗಳಿಂದ ಸೋತೆ ಎಂದು ಹೇಳಿಕೆ ನೀಡಿರುವ ನಿಖಿಲ್ ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಗುಡುಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಬ್ರಾಹಿಂ, ಯೋಗೇಶ್ವರ್ ಲೊಕಲ್ ಅಭ್ಯರ್ಥಿ. ಆತನು ಒಕ್ಕಲಿಗ ಜನಾಂಗದವರಾಗಿದ್ದಾರೆ. ನಿನಗೆ ಇರೋ ಬಂಡವಾಳ ನಿಮ್ಮಜ್ಜ. ನಿಮ್ಮಜ್ಜನವರಿಗೆ ಇದ್ದಿದ್ದು ಸಿದ್ದಾಂತ ಅದನ್ನ ಬಲಿಕೊಡಿಸಿದ್ರಿ. ಅಹಿಂದ ದಲಿತ ಮತ ಇಲ್ವಾ ? ನಿಮ್ಮ ದೌರ್ಬಲ್ಯ ಮುಚ್ಚಿಕೊಳ್ಳೊಕೆ ಯಾಕೆ ಮುಸ್ಲಿಮರ ಮೇಲೆ ಅಪಾದನೆ ಮಾಡುತ್ತೀರಾ? ಎಂದು ಪ್ರಶ್ನಿಸಿದ ಅವರು, ರಾಮನಗರದಲ್ಲಿ ನಿಮ್ಮಜ್ಜ ಅಲ್ಪಸಂಖ್ಯಾತರ ಮತಗಳಿಂದಲೇ ಗೆದ್ದು ಸಿಎಂ ಆಗಿದ್ದು, ಅವರು ಪ್ರಧಾನಿಯಾಗಲು ನಮ್ಮ ಕೊಡುಗೆ ಸಾಕಷ್ಟಿದೆ. ನಿಮ್ಮಪ್ಪ ಕೂಡ ಸಾಬ್ರ ಮತಗಳಿಂದಲೇ ಗೆದ್ದಿದ್ದು. ಚನ್ನಪಟ್ಟಣದಲ್ಲಿ ಮುಸ್ಲಿಮರು ವೋಟು ಕೊಟ್ಟಾಗ ನಿಮ್ಮಜ್ಜ ಸಿಎಂ ಆದ್ರು, 16 ಜನ ಸಂಸದರಾದಾಗ ಪಿಎಂ ಆದ್ರು. ಆಗ ನೀನು ಇನ್ನೂ ಹುಟ್ಟಿರಲಿಲ್ಲ, ಬೆಳೆಯೋ ಹುಡುಗ ನೀನು. ನಿನ್ನ ಪರಿಸ್ಥಿತಿ ಕಂಡು ಅಯ್ಯೋ ಅನಿಸಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಟಿ ದೇವೇಗೌಡರು ಸತ್ಯ ನುಡಿದಿದ್ದಾರೆ. ಜಿಟಿಡಿ ನಮ್ಮ ಪಾರ್ಟಿಗೆ ಬಂದಿರಲಿಲ್ಲ. 60 ಬರಬೇಕಿದ್ದ ಸೀಟು, 19 ಬಂತು. ನಿಮ್ಮಪ್ಪ ಚುನಾವಣಾ ಪೂರ್ವದಲ್ಲಿ ಅಮಿತ್ ಶಾ ಜೊತೆ ಮಾತಾಡಿದ್ದು ಗೊತ್ತಾಗಿ ಕಡಿಮೆ ಬಂತು. ಅದು ಸಾಬ್ರು ಓಟಿಂದ ಗೆದ್ದಿದ್ದು ಎಂದು ಹೇಳಿದ್ದಾರೆ.