ಬೆಂಗಳೂರು: ರಾಜಕೀಯ ಬದ್ಧ ವೈರಿಗಳಾಗಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮದುವೆ ಮನೆಯಲ್ಲಿ ಒಂದಾಗಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಈಶ್ವರಪ್ಪ ಕಾಣಿಸಿಕೊಂಡಿದ್ದಾರೆ. ಸಂಸದ ರಾಘವೇಂದ್ರ ಮಗನ ಆರತಕ್ಷತೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಮಗ ಕಾಂತೇಶ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ಈಶ್ವರಪ್ಪ ಅವರನ್ನು ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಆಗ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬೆನ್ನು ತಟ್ಟಿ ಈಶ್ವರಪ್ಪ ಮಾತನಾಡಿಸಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿ.ವೈ. ರಾಘವೇಂದ್ರ ವಿರುದ್ಧ ಈಶ್ವರಪ್ಪ ರೆಬೆಲ್ ಸ್ಪರ್ಧೆ ಮಾಡಿದ್ದರು. ಆನಂತರ ಈಶ್ವರಪ್ಪ ಹಾಗೂ ಯಡಿಯೂರಪ್ಪ ಕುಟುಂಬದ ಮಧ್ಯೆ ವೈಷಮ್ಯ ತಲೆದೋರಿತ್ತು. ಈಗ ಎಲ್ಲವನ್ನೂ ಮರೆತು ಈಶ್ವರಪ್ಪ ಅವರು ಆತ್ಮೀಯವಾಗಿ ಆಗಮಿಸಿ ಮಾತನಾಡಿದ್ದಾರೆ.