ಬೆಂಗಳೂರು: “ಪಕ್ಷದ ಕಾರ್ಯಕರ್ತರು ಮುಖಂಡರಿಗಾಗಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಿಗೆ ಶ್ರಮಿಸುತ್ತಾರೆ. ಹೀಗಾಗಿ ಪಕ್ಷದ ಮುಖಂಡರೆಲ್ಲರೂ ಸೇರಿ ಕಾರ್ಯಕರ್ತರಿಗಾಗಿ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಶ್ರಮಿಸಬೇಕು” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್ ಅವರು ಪಕ್ಷದ ಮುಖಂಡರಿಗೆ ಕರೆ ನೀಡಿದರು.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಗುರುವಾರ ಹಾಸನ ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
“ಶಾಸಕರ ಚುನಾವಣೆಯಲ್ಲಿ ಮಾತ್ರ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು, ಕಾರ್ಯಕರ್ತರ ಚುನಾವಣೆಯಲ್ಲಿ ಮಾತ್ರ ನಾಯಕರು ಒಟ್ಟಾಗುವುದಿಲ್ಲ ಎಂದರೆ ಯಾವ ನ್ಯಾಯ? ಹೀಗಾಗಿ ನೀವು ಸ್ವಾಮಿ ನಿಷ್ಠೆ ಬಿಟ್ಟು ಪಕ್ಷ ನಿಷ್ಠೆ ಇಟ್ಟುಕೊಳ್ಳಿ. ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿಯಲ್ಲಿ ಕಾರ್ಯಕರ್ತರ ಪರವಾಗಿ ಕೆಲಸ ಮಾಡಿ” ಎಂದರು.
“ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಸೋತಿದ್ದರೆ ಅದಕ್ಕೆ ಕಾರಣ ಕಾಂಗ್ರೆಸ್ ನವರೇ ಹೊರತು, ಬೇರೆ ಯಾರೂ ಅಲ್ಲ. ಲೋಕಸಭೆ ಚುನಾವಣೆ ಸಮಯದಲ್ಲಿ ನನಗೆ ಉಸ್ತುವಾರಿ ನೀಡಿದ್ದಾಗ ಅಲ್ಲಿ ಗೆಲ್ಲುವ ಪರಿಸ್ಥಿತಿ ಇರಲಿಲ್ಲ. ನಾನು ಅಲ್ಲಿಗೆ ಹೋದ ದಿನ ಅಲ್ಲಿನ ನಾಯಕರು ನನ್ನ ಜತೆ ಗಲಾಟೆ ಮಾಡಿದ್ದರು. ಆಗ ನಾನು ಕಾಂಗ್ರೆಸ್ ಮುಖಂಡರಿಗೆ ಒಂದೂವರೆ ತಿಂಗಳು ರಜೆ ಮೇಲೆ ಬೇರೆಡೆ ಹೋಗಿ ನಾವು ಕಾರ್ಯಕರ್ತರ ಜತೆ ಚುನಾವಣೆ ಮಾಡುತ್ತೇವೆ ಎಂದು ಹೇಳಿದೆ. ಆಗ ನಮಗೆ ಕಾರ್ಯಕರ್ತರ ಮೇಲೆ ನಂಬಿಕೆ ಇತ್ತೇ ಹೊರತು, ನಾಯಕರ ಮೇಲೆ ಅಲ್ಲ” ಎಂದು ತಿಳಿಸಿದರು.
ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ
“ಕೆಪಿಸಿಸಿ ಅಧ್ಯಕ್ಷರು ಸದಾ ವ್ಯಕ್ತಿ ಪೂಜೆಗಿಂತ, ಪಕ್ಷ ಪೂಜೆ ಮಾಡಬೇಕು ಎಂದು ಹೇಳುತ್ತಾರೆ. ಪಕ್ಷ ಸಂಘಟನೆಯಲ್ಲಿ ಇದು ಬಹಳ ಮುಖ್ಯ. ಪಕ್ಷ ಸಂಘಟನೆ ಎಂದರೆ ಡಿ.ಕೆ. ಶಿವಕುಮಾರ್, ಶಿವಕುಮಾರ್ ಎಂದರೆ ಪಕ್ಷ ಸಂಘಟನೆ. ಇಡೀ ರಾಜ್ಯದಲ್ಲಿ ಸಂಘಟನೆಗೆ ಬಲ ತುಂಬಲು ಶಕ್ತಿ ಇದ್ದರೆ ಅದು ಶಿವಕುಮಾರ್ ಅವರಿಗೆ. ಅವರಿಗೆ ವ್ಯಕ್ತಿ ಪೂಜೆ ಮಾಡಿಸಿಕೊಳ್ಳುವ ಆಸೆ ಇಲ್ಲ. ಅವರು ಸದಾ ಪಕ್ಷದ ಬಗ್ಗೆ ಚಿಂತಿಸುತ್ತಾರೆ” ಎಂದರು.