ಬೆಂಗಳೂರು: ದೃಶ್ಯಂ ಸಿನಿಮಾ ಪ್ರೇರಣೆಯಿಂದ ಮಹಿಳೆಯ ಕೊಲೆ ಮಾಡಿ 4 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಕ್ಷ್ಮಣ್ ಬಂಧಿತ ಆರೋಪಿಯಾಗಿದ್ದು, ಕೊತ್ತನೂರು (Kothanur) ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಗರದ ನಾಗೇನಹಳ್ಳಿಯ ಸ್ಲಂ ಬೋರ್ಡ್ನಲ್ಲಿರುವ ಇ-ಬ್ಲಾಕ್ನಲ್ಲಿ ಮೇರಿ (50) ಎಂಬುವವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಆರೋಪಿ ಲಕ್ಷ್ಮಣ್ ಕೂಡ ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ. ಹೀಗಾಗಿ ಇಬ್ಬರೂ ಪರಿಚಯವಾಗಿದ್ದರು. ಮಹಿಳೆಯ ಹತ್ತಿರ ಚಿನ್ನಾಭರಣವಿರುವ ಕುರಿತು ಲಕ್ಷ್ಮಣ್ಗೆ ಗೊತ್ತಾಗಿತ್ತು. ಇನ್ನೊಂದೆಡೆ ಆರೋಪಿ ಲಕ್ಷ್ಮಣ್ ಮೈ ತುಂಬ ಸಾಲ ಮಾಡಿಕೊಂಡಿದ್ದ. ಹೀಗಾಗಿ ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚವ ಪ್ಲಾನ್ ಮಾಡಿದ್ದ.
ದೃಶ್ಯಂ ಸಿನಿಮಾ ನೋಡಿದ್ದ ಆತ, ತನ್ನ ಬಳಿ ಇದ್ದ 4 ಸಿಮ್ ಕಾರ್ಡ್ ಪೈಕಿ 3 ಸಿಮ್ ಕಾರ್ಡ್ಗಳನ್ನು ಡಿಜೆ ಹಳ್ಳಿಯಲ್ಲಿದ್ದ ಪತ್ನಿ ನಿವಾಸದಲ್ಲಿಟ್ಟಿದ್ದ. ಹಿಂದಿನ ವರ್ಷದ ನ. 26ರಂದು ಕೊಲೆ ಮಾಡಿ, ಆಟೋದಲ್ಲಿ ಶವವನ್ನು ಹಾಕಿಕೊಂಡು ಬಾಗಲೂರಿನ ಹೊಸೂರು ಬಂಡೆಯ ಕಸ ಡಂಪಿಂಗ್ ಯಾರ್ಡ್ ಪಕ್ಕ ಬಿಸಾಡಿದ್ದಾನೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಕೊಲೆಯ ದಿನ ಆರೋಪಿಯ ಟವರ್ ಲೊಕೇಶನ್ ಡಿಜೆ ಹಳ್ಳಿಯಲ್ಲಿ ಇದ್ದಿದ್ದರಿಂದ ಪೊಲೀಸರಿಗೆ ಆತನ ಮೇಲೆ ಅನುಮಾನ ಮೂಡಿರಲಿಲ್ಲ. ಆನಂತರ ಆತ ನಾಪತ್ತೆಯಾಗಿದ್ದ. ಆದರೆ, ಲಕ್ಷ್ಮಣ್ ಇತ್ತೀಚೆಗೆ ಪ್ರೇಯಸಿಯ ಜೊತೆಗೆ ಸಂಪರ್ಕದಲ್ಲಿದ್ದ. ಆಕೆಯ ಜೊತೆಗೆ ದಿನವಿಡೀ ಮಾತಾಡಲು ಶುರು ಮಾಡಿದ್ದ. ಆ ನಂಬರ್ ಟ್ರೇಸ್ ಮಾಡಿದ ಪೊಲೀಸರಿಗೆ ಲಕ್ಷ್ಮಣ್ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಲಕ್ಷ್ಮಣ್ನನ್ನು ಬಂಧಿಸಿ ವಿಚಾರಿಸಿದಾಗ ಮಹಿಳೆ ಬಳಿಯಿದ್ದ 50 ಗ್ರಾಂ ಚಿನ್ನಕ್ಕಾಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.