ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಘಟಕದ ವತಿಯಿಂದ ಜನಾಕ್ರೋಶ ಯಾತ್ರೆ ನಡೆಯುತ್ತಿದೆ. ಈ ಮಧ್ಯೆ ರಾಜ್ಯಾಧ್ಯಕ್ಷ ಆಯ್ಕೆಯ ವಿಚಾರ ಕೂಡ ಮುನ್ನೆಲೆಗೆ ಬಂದಿದ್ದು, ಜನಾಕ್ರೋಶ ಯಾತ್ರೆಯ ಮಧ್ಯದಲ್ಲೇ ರಾಜ್ಯಾಧ್ಯಕ್ಷರಾಗಿ ಬಿ. ವೈ.ವಿಜಯೇಂದ್ರ ಪುನಾರಾಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೌದು! ಇದು ನಿಜಕ್ಕೂ ಜನಾಕ್ರೋಶ ಯಾತ್ರೆಯ ಎಫೆಕ್ಟ್ ಅಂತಲೇ ರಾಜಕಾರಣದಲ್ಲಿ ಚರ್ಚೆಯಾಗುತ್ತಿದೆ. ಈಗಾಗಲೇ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಆರಂಭಿಸಿದೆ. ಈಗ ಬಿಜೆಪಿ ರಸ್ತೆಗೀಳಿದು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದೆ. ಹೈಕಮಾಂಡ್ ನಾಯಕರ ಸಲಹೆ- ಸೂಚನೆ ಮೇರೆಗೆ ರಸ್ತೆಗೀಳಿದು ಬಿಜೆಪಿ ನಾಯಕರು ಹೋರಾಟ ಮಾಡುತ್ತಿದ್ದಾರೆ.
ವಿಜಯೇಂದ್ರ ನೇತೃತ್ವದಲ್ಲಿ ಈ ಜನಾಕ್ರೋಶ ಯಾತ್ರೆ ನಡೆಯುತ್ತಿದೆ. ಯಾತ್ರೆಯಲ್ಲಿ ವಿಜಯೇಂದ್ರ ಫುಲ್ ಆ್ಯಕ್ಟೀವ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈ ಜನಾಕ್ರೋಶ ಯಾತ್ರೆ ಹಳೆಯ ಮೈಸೂರು ಭಾಗ ಮುಗಿಸಿ, ಕರಾವಳಿಯಲ್ಲಿ ಸಾಗುತ್ತಿದೆ. ಈಗ ಯಾತ್ರೆಯ ಮಧ್ಯದಲ್ಲೇ ರಾಜ್ಯಾಧ್ಯಕ್ಷ ಸ್ಥಾನ ಗಟ್ಟಿ ಮಾಡಿಕೊಳ್ಳಲು ವೇದಿಕೆ ಸಿದ್ಧವಾಗುತ್ತಿದೆ. ಏಪ್ರಿಲ್ ತಿಂಗಳಲ್ಲೇ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನ ಪುನಾರಾಯ್ಕೆ ಮಾಡುವ ಕಸರತ್ತು ನಡೆಯುತ್ತಿದೆ. ಈ ಬೆನ್ನಲ್ಲೇ ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ಯಾತ್ರೆ ಆಯೋಜನೆ ಮಾಡಲಾಗಿದೆ. ಈಗ ಯಾತ್ರೆಯ ಮಧ್ಯದಲ್ಲೇ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಹೆಸರು ಘೋಷಣೆಯಾದರೆ, ಅವರಿಗೆ ಆನೆ ಬಲ ಸಿಕ್ಕಂತಾಗುತ್ತದೆ. ಹೀಗಾಗಿ ಯಾತ್ರೆಯ ಎಫೆಕ್ಟ್ ನಿಂದಲೇ ರಾಜ್ಯಾಧ್ಯಕ್ಷ ಹುದ್ದೆ ಮತ್ತೆ ಒಲಿದು ಬರಲಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಆದರೆ, ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.