ರಾಜ್ಯದಲ್ಲಿ ಹೊಸ ಜಿಲ್ಲೆ, ತಾಲೂಕು ರಚನೆಗೆ ಮುಹೂರ್ತ ಕೂಡಿ ಬಂದಿದೆಯಾ?
ಹೌದು, ಈಗಾಗಲೇ ತುಮಕೂರನ್ನು ಮೂರು ಭಾಗ ಮಾಡಿ ಮಧುಗಿರಿ ಮತ್ತು ತಿಪಟೂರನ್ನು ಜಿಲ್ಲೆ ಮಾಡ್ತೀವಿ ಅಂತಾ ಖುದ್ದು ಸಚಿವ ಕೆ.ಎನ್. ರಾಜಣ್ಣ ಘೋಷಿಸಿದ್ದಾರೆ. ಆದರೆ ಇಂಥದ್ದೊಂದು ನಿರ್ಧಾರ ಕೈಗೊಳ್ಳಲು ಇದೀಗ ಗಡುವು ನಿಗದಿಯಾಗಿದೆ. ಹಾಗಂತಾ ಇದು ಯಾರೋ ಹೋರಾಟಗಾರರೋ, ಸ್ಥಳೀಯರೋ ನೀಡಿರುವ ಗಡುವಲ್ಲ. ಬದಲಿಗೆ ಕೇಂದ್ರ ಸರ್ಕಾರ ಪ್ರತಿ ರಾಜ್ಯಗಳಿಗೂ ನೀಡಿರುವ ಆದೇಶ.
ಏಪ್ರಿಲ್ 1 ರಿಂದ ದೇಶದಲ್ಲಿ ಜಾತಿ ಗಣತಿಗೆ ಮುನ್ನುಡಿ ಬರೆಯಲಾಗುತ್ತಿದೆ. ಈ ನಿಟ್ಟಿನಲ್ಲಿ, ಯಾವುದೇ ರಾಜ್ಯವಿರಲಿ, ತನ್ನಲ್ಲಿ ಹೊಸ ಜಿಲ್ಲೆ, ತಾಲೂಕು, ಠಾಣೆ ವ್ಯಾಪ್ತಿ ಬದಲಾವಣೆಯಂತಹ ಕೆಲಸಗಳಿದ್ದರೆ ಮುಗಿಸಿಕೊಳ್ಳಿ ಅಂತಾ ಆದೇಶಿಸಿದೆ. ಅಷ್ಟೇ ಅಲ್ಲಾ ಇಂಥದ್ದೇನಾದರೂ ಯೋಜನೆಗಳಿದ್ದರೆ ಅದನ್ನು ಈ ವರ್ಷದ ಡಿಸೆಂಬರ್ 31ರೊಳಗೆ ಮುಗಿಸಿಕೊಳ್ಳಿ ಅಂತಲೂ ಉಲ್ಲೇಖಿಸಿದೆ. ಹೀಗಾಗಿ ರಾಜ್ಯದಲ್ಲಿ ನೂತನ ಜಿಲ್ಲೆಗಳ ರಚನೆ ಆಗೋದಾದರೆ ಅದು ವರ್ಷಾಂತ್ಯದೊಳಗೆ ಆಗಬೇಕಿದೆ.
ಒಂದೆಡೆ ತುಮಕೂರನ್ನು ಮೂರಾಗಿಸುವ ಸಿದ್ಧತೆ ನಡೆಸಿದರೆ ರಾಜ್ಯದ ಅತಿ ದೊಡ್ಡ ಜಿಲ್ಲೆ ಖ್ಯಾತಿಯ ಬೆಳಗಾವಿಯನ್ನೂ ಮೂರು ಭಾಗವಾಗಿಸುವ ಒತ್ತಡವಿದೆ. ಅಷ್ಟೇ ಅಲ್ಲಾ ಧಾರವಾಡವನ್ನೂ ವಿಭಜಿಸಿ 3 ಜಿಲ್ಲೆಗಳನ್ನು ರಚಿಸುವ ಮನಸ್ಸು ಕೆಲವರಿಗಿದೆ. ಹೀಗಾಗಿ ಇಂತಹ ಯಾವ ಬದಲಾವಣೆಗಳಿದ್ದರೂ ಅದು ಈ ವರ್ಷದ ಅಂತ್ಯದ ವೇಳೆಗೆ ಬಗೆಹರಿಯಬೇಕಿದೆ. ಹಾಗಾಗಿ ಹಲವು ದಶಕಗಳ ಕೆಲ ಹೋರಾಟಗಳಿಗೆ ಈ ವರ್ಷ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆಗಳಿವೆ.