ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ನಡೆಸಿತು. ಈ ವೇಳೆ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಹಲವಾರು ಹಲವು ಪ್ರಶ್ನೆಗಳನ್ನು ಕೇಳಿತು. ವಿಶೇಷವಾಗಿ ‘ವಕ್ಫ್ ಬೈ ಯೂಸರ್’ ಆಸ್ತಿಗಳಿಗೆ ಸಂಬಂಧಿಸಿದ ಕಾಯ್ದೆಯ ನಿಬಂಧನೆಗಳ ಸ್ಪಷ್ಟತೆ ಹಾಗೂ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರನ್ನು ಸೇರಿಸುವ ನಿಬಂಧನೆಯ ಬಗ್ಗೆ ಚರ್ಚಿಸುತ. ಒಂದು ಹಂತದಲ್ಲಿ “ಹಿಂದೂ ದೇವಾಲಯ ಮಂಡಳಿಗಳಲ್ಲಿ ಮುಸ್ಲಿಮರನ್ನು ಸೇರಿಸಲು ಸರ್ಕಾರ ಅವಕಾಶ ನೀಡುತ್ತದೆಯೇ?” ಎಂದು ಸಾಲಿಸಿಟರ್ ಜನರಲ್ಗೆ ಪ್ರಶ್ನಿಸಿತು. ಅಂತಿಮವಾಗಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನು ಒಳಗೊಂಡ ಪೀಠವು, ದೇಶದ ವಿವಿಧ ಭಾಗಗಳಿಂದ ಸಲ್ಲಿಕೆಯಾಗಿರುವ 73 ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿತು. ವಿಚಾರಣೆಯ ಆರಂಭದಲ್ಲಿ, ಮುಖ್ಯ ನ್ಯಾಯಮೂರ್ತಿ ಖನ್ನಾ ಅವರು ಅರ್ಜಿದಾರರಿಗೆ ಎರಡು ಪ್ರಶ್ನೆಗಳನ್ನು ಮುಂದಿಟ್ಟರು. ಮೊದಲನೆಯದಾಗಿ, ಈ ಅರ್ಜಿಗಳನ್ನು ಹೈಕೋರ್ಟ್ಗೆ ಕಳುಹಿಸಬೇಕೇ ಮತ್ತು ಎರಡನೆಯದಾಗಿ, ಅರ್ಜಿದಾರರು ಯಾವ ವಿಷಯಗಳ ಬಗ್ಗೆ ವಾದಿಸಲು ಉದ್ದೇಶಿಸಿದ್ದಾರೆ ಎಂದು ಕೇಳಿದರು.
ಹಿರಿಯ ವಕೀಲ ಕಪಿಲ್ ಸಿಬಲ್, ಒಬ್ಬ ಅರ್ಜಿದಾರರ ಪರವಾಗಿ ವಾದಿಸುತ್ತಾ, ಹೊಸ ಕಾಯ್ದೆಯ ಹಲವು ನಿಬಂಧನೆಗಳು ಸಂವಿಧಾನದ 26ನೇ ವಿಧಿಯನ್ನು ಉಲ್ಲಂಘಿಸುತ್ತವೆ ಎಂದರು. ಈ ವಿಧಿಯು ಧಾರ್ಮಿಕ ವಿಷಯಗಳನ್ನು ನಿರ್ವಹಿಸುವ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಅದೇ ರೀತಿ ಹೊಸ ಕಾಯ್ದೆಯು ಕಲೆಕ್ಟರ್ಗೆ ನೀಡಿರುವ ಅಧಿಕಾರಗಳನ್ನು ಸಿಬಲ್ ಪ್ರಶ್ನಿಸಿದರು. ಕಲೆಕ್ಟರ್ ಸರ್ಕಾರದ ಭಾಗವಾಗಿದ್ದು, ಅವರು ನ್ಯಾಯಾಧೀಶರ ಪಾತ್ರವನ್ನು ವಹಿಸಿದರೆ ಅದು ಸಂವಿಧಾನ ವಿರೋಧಿಯಾಗಲಿದೆ ಎಂದು ವಾದಿಸಿದರು.
ಬಳಿಕ ಸಿಬಲ್ ‘ವಕ್ಫ್ ಬೈ ಯೂಸರ್’ ವಿಷಯವನ್ನು ಎತ್ತಿದರು. ಈ ನಿಬಂಧನೆಯಡಿ, ದೀರ್ಘಕಾಲದಿಂದ ಧಾರ್ಮಿಕ ಅಥವಾ ದಾನಧರ್ಮದ ಉದ್ದೇಶಗಳಿಗೆ ಬಳಸಲಾಗುತ್ತಿರುವ ಆಸ್ತಿಯನ್ನು, ಅಧಿಕೃತ ದಾಖಲೆಗಳಿಲ್ಲದಿದ್ದರೂ, ವಕ್ಫ್ ಆಸ್ತಿಯೆಂದು ಪರಿಗಣಿಸಲಾಗುತ್ತದೆ. ಆದರೆ, ಹೊಸ ಕಾಯ್ದೆಯು ವಿವಾದಿತ ಆಸ್ತಿಗಳು ಅಥವಾ ಸರ್ಕಾರಿ ಭೂಮಿಗಳಿಗೆ ಅನ್ವಯ ಆಗುವುದಿಲ್ಲ ಎಂದು ಹೇಳಿದೆ. “‘ವಕ್ಫ್ ಬೈ ಯೂಸರ್’ ಇಸ್ಲಾಂನ ಅವಿಭಾಜ್ಯ ಭಾಗ. 3,000 ವರ್ಷಗಳ ಹಿಂದೆ ರಚಿತವಾದ ಆಸ್ತಿಗೆ ಈಗ ದಾಖಲೆ ಕೇಳಲಾಗುತ್ತಿದೆ ,” ಎಂದು ಸಿಬಲ್ ವಾದಿಸಿದರು.
4 ಲಕ್ಷ ವಕ್ಫ್ ಆಸ್ತಿಗಳು ‘ವಕ್ಫ ಬೈ ಯೂಸರ್’
ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಅರ್ಜಿದಾರರ ಪರವಾಗಿ ವಾದಿಸುತ್ತಾ, ದೇಶದ ಒಟ್ಟು 8 ಲಕ್ಷ ವಕ್ಫ್ ಆಸ್ತಿಗಳಲ್ಲಿ 4 ಲಕ್ಷ ಆಸ್ತಿಗಳು ‘ವಕ್ಫ್ ಬೈ ಯೂಸರ್’ ವಿಭಾಗಕ್ಕೆ ಸೇರಿದ್ದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ, “ದೆಹಲಿ ಹೈಕೋರ್ಟ್ ಕೂಡ ವಕ್ಫ್ ಭೂಮಿಯ ಮೇಲೆ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ. ಎಲ್ಲಾ ‘ವಕ್ಫ್ ಬೈ ಯೂಸರ್’ ತಪ್ಪು ಎಂದು ನಾವು ಹೇಳುತ್ತಿಲ್ಲ, ಆದರೆ ಇದರ ಬಗ್ಗೆ ನಿಜವಾದ ಆತಂಕವಿದೆ,” ಎಂದರು. ಈ ವೇಳೆ ಸಿಂಘ್ವಿ, ಕಾಯ್ದೆಯ ಕೆಲವು ನಿಬಂಧನೆಗಳಿಗೆ ಮಾತ್ರ ತಡೆಯಾಜ್ಞೆ ಕೋರಲಾಗಿದೆಯೇ ಹೊರತು ಸಂಪೂರ್ಣ ಕಾಯ್ದೆಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರದ ವಾದವೇನು?
ಕೇಂದ್ರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಕಾಯ್ದೆಯನ್ನು ಸಂಸತ್ತಿನಲ್ಲಿ ವಿವರವಾದ ಚರ್ಚೆಯ ನಂತರ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಯ ಬಳಿಕ ಎರಡೂ ಸದನಗಳಲ್ಲಿ ಅಂಗೀಕರಿಸಲಾಗಿದೆ ಎಂದರು. ಮುಖ್ಯ ನ್ಯಾಯಮೂರ್ತಿ ಖನ್ನಾ, ‘ವಕ್ಫ್ ಬೈ ಯೂಸರ್’ ನಿಬಂಧನೆಗಳ ಕುರಿತು ಗಮನ ಕೇಂದ್ರೀಕರಿಸುವಂತೆ ಮೆಹ್ತಾ ಅವರಿಗೆ ಸೂಚಿಸಿದರು. “13ನೇ, 14ನೇ, ಮತ್ತು 15ನೇ ಶತಮಾನಗಳಲ್ಲಿ ನಿರ್ಮಿತವಾದ ಹಲವು ಮಸೀದಿಗಳು ವಕ್ಫ್ ಭಾಗವಾಗಿವೆ. ಅವುಗಳಿಗೆ ದಾಖಲೆಗಳನ್ನು ಒದಗಿಸುವುದು ಅಸಾಧ್ಯ ಎಂದರು. ‘ವಕ್ಫ್ ಬೈ ಯೂಸರ್’ ಆಸ್ತಿಗಳನ್ನು ಡಿನೋಟಿಫೈ ಮಾಡಿದರೆ ಸಮಸ್ಯೆ ಉಂಟಾಗಲಿದೆ ಎಂದಿತು. ಕೆಲವು ದುರುಪಯೋಗದ ಉದಾಹರಣೆಗಳಿದ್ದರೂ, ನಿಜವಾದ ವಕ್ಫ್ ಆಸ್ತಿಗಳೂ ಇವೆ ಎಂದು ಸ್ಪಷ್ಟಪಡಿಸಿತು.
ದೀರ್ಘಕಾಲದ ವಕ್ಫ್ಗಳ ನೋಂದಣಿ ಸಮಸ್ಯೆ
“ದೀರ್ಘಕಾಲದಿಂದ ಇರುವ ‘ವಕ್ಫ್ ಬೈ ಯೂಸರ್’ ಆಸ್ತಿಗಳನ್ನು ಹೇಗೆ ನೋಂದಾಯಿಸುವಿರಿ? ಅವುಗಳ ಬಳಿ ಯಾವ ದಾಖಲೆಗಳಿರುತ್ತವೆ? ಹಾಗಾಗದಿದ್ದರೆ ರದ್ದುಗೊಳಿಸಿದಂತೆ ಆಗುತ್ತದೆ. ಕೆಲವು ದುರುಪಯೋಗಗಳಿವೆ. ಆದರೆ ನಿಜವಾದ ವಕ್ಫ್ಗಳೂ ಇವೆ. ಅವುಗಳನ್ನು ರದ್ದುಗೊಳಿಸಿದರೆ ಸಮಸ್ಯೆಯಾಗುತ್ತದೆ,” ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.
ಕೇಂದ್ರ ವಕ್ಫ ಮಂಡಳಿಯ ಸಂಯೋಜನೆ
ಹೊಸ ಕಾಯ್ದೆಯಡಿ. ವಕ್ಫ್ ಮಂಡಳಿಯ ಸಂಯೋಜನೆಯ ಕುರಿತು ಕೋರ್ಟ್ ಚರ್ಚಿಸಿತು. “ಮೆಹ್ತಾ ಅವರೇ, ನೀವು ಹಿಂದೂ ದೇವಾಲಯ ಮಂಡಳಿಗಳಲ್ಲಿ ಮುಸ್ಲಿಮರನ್ನು ಸೇರಿಸಲು ಅವಕಾಶ ನೀಡುವಿರಾ? ಮುಕ್ತವಾಗಿ ಹೇಳಿ,” ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಹೊಸ ಕಾಯ್ದೆಗೆ ಸಂಬಂಧಿಸಿದಂತೆ ದೇಶದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳು ಬೇಸರದ ಸಂಗತಿಯೆಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, “ಅವರು ವ್ಯವಸ್ಥೆಯ ಮೇಲೆ ಒತ್ತಡ ಹೇರಬಹುದು ಎಂದು ಭಾವಿಸುತ್ತಿದ್ದಾರೆ,” ಎಂದರು. ಇದಕ್ಕೆ ಸಿಬಲ್, “ಯಾರು ಒತ್ತಡ ಹೇರಿದ್ದಾರೆ ಎಂಬುದು ತಿಳಿಯಲಿದೆ,” ಎಂದು ಉತ್ತರಿಸಿದರು.