ಬೆಂಗಳೂರು: ಪೌರಕಾರ್ಮಿಕರಿಗೆ ಸಿಎಂ ಹಾಗೂ ಡಿಸಿಎಂ ಕೊಟ್ಟ ಮಾತು ಹಾಗೆಯೇ ಉಳಿಯಿತಾ? ನಾಯಕರು ಕೊಟ್ಟ ಮಾತು ಮರೆತರಾ? ಎಂಬ ಆರೋಪವೊಂದು ಈಗ ಕೇಳಿ ಬರುತ್ತಿದೆ.
ಕಸದ ಲಾರಿ ಹಾಗೂ ಟಿಪ್ಪರ್ ಡ್ರೈವರ್, ಸಹಾಯಕರನ್ನು ಖಾಯಂ ಮಾಡ್ತೀನಿ ಅಂತಾ ಸಿಎಂ, ಡಿಸಿಎಂ ಭರವಸೆ ನೀಡಿದ್ದರು. ಆದರೆ, ಈಗ ಆ ಮಾತು ಮರೆತಿದ್ದಾರೆಂದು ಪೌರ ಕಾರ್ಮಿಕರು ಆರೋಪಿಸಿದ್ದಾರೆ. ಸಿಎಂ, ಡಿಸಿಎಂ ಕೊಟ್ಟ ಭರವಸೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕಸದ ಲಾರಿ, ಟಿಪ್ಪರ್ ಚಾಲಕರು, ಸಹಾಯಕರು ಮುಷ್ಕರಕ್ಕೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಹೀಗಾಗಿ ರಾಜಧಾನಿಗೆ ಮತ್ತೆ ಕಸದ ಸಂಕಷ್ಟ ತಟ್ಟುವ ಸಾಧ್ಯತೆ ಇದೆ. ಮೇ. 1ರಂದು 13 ಸಾವಿರ ಪೌರ ಕಾರ್ಮಿಕರನ್ನು ಖಾಯಂ ಮಾಡಿ ಸಿಎಂ ಆದೇಶ ಪ್ರತಿ ನೀಡಿದ್ದರು. ಅದೇ ಕಾರ್ಯಕ್ರಮದಲ್ಲಿ ಲಾರಿ ಹಾಗೂ ಟೆಪ್ಪರ್ ಡ್ರೈವರ್ ಹಾಗೂ ಸಹಾಯಕರನ್ನು ಖಾಯಂ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ಆದರೆ, ಇದುವರೆಗೂ ಕಸದ ಲಾರಿ, ಟಿಪ್ಪರ್, ಡ್ರೈವರ್ ಹಾಗೂ ಸಹಾಯಕರನ್ನು ಖಾಯಂ ಮಾಡಿಕೊಂಡಿಲ್ಲ. ಅಲ್ಲದೇ, ಹೊಸ ಕಸದ ಟೆಂಡರ್ ನಲ್ಲಿ ಟೆಂಡರ್ ಪಡೆದ ಗುತ್ತಿಗೆದಾರರೇ ಡ್ರೈವರ್ ಹಾಗೂ ಸಹಾಯಕರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ ಸುಮಾರು 5 ಸಾವಿರ ಲಾರಿ ಹಾಗೂ ಟೆಪ್ಪರ್ ಡ್ರೈವರ್, ಸಹಾಯಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜೂ. 24ರಿಂದ ಕಸದ ಲಾರಿ ಸಂಚಾರ ಸ್ಥಗಿತ ಮಾಡಿ ಕೆಲಸ ಖಾಯಂಗೆ ಆಗ್ರಹಿಸಿ ಕಸ ಸಾಗಿಸುವ ಆಟೋ, ಲಾರಿ ಚಾಲಕರ ಪ್ರತಿಭಟನೆ ನಡೆಸಲು ಕರೆ ಕೊಟ್ಟಿದ್ದಾರೆ.
ಕಾರ್ಮಿಕರು ತೆಗೆದುಕೊಂಡ ನಿರ್ಧಾರಗಳೇನು?
ಕೆಲಸ ಖಾಯಂಗೆ ಆಗ್ರಹಿಸಿ ಕಸ ವಿಲೇವಾರಿ ನಿಲ್ಲಿಸಲು ಪ್ಲಾನ್
ಜೂ. 24ರಿಂದ ಆಮರಣಾಂತ ಪ್ರತಿಭಟನೆಗೆ ಕರೆ
ಕಸ ಸಂಗ್ರಹ ಆಟೋಗಳು, ಲಾರಿಗಳ ಸಂಚಾರ ಬಂದ್
ವಿವಿಧ ಸಂಘಟನೆಗಳ ಜೊತೆ ಸೇರಿ ಪ್ರತಿಭಟನೆಗೆ ಸಿದ್ಧತೆ
ಫ್ರೀಡಂ ಪಾರ್ಕ್ ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ
4 ಸಾವಿರ ಕಸದ ಆಟೋಗಳ ಸೇವೆ ಬಂದ್
700 ಕಸದ ಲಾರಿಗಳು ಬಂದ್
ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಇರುವವರ ಖಾಯಂಗೆ ಪಟ್ಟು
ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಹೆಚ್ಚಿದೆ. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ಕಸ ನಿರ್ವಹಣೆಯಲ್ಲಿ ಸಮಸ್ಯೆಯಾಗುತ್ತಿದೆ. ಇದರ ಮಧ್ಯೆ ಕಾರ್ಮಿಕರು ಪ್ರತಿಭಟನೆ ನಡೆಸಲು ನಿರ್ಧಾರ ಕೈಗೊಂಡಿರುವುದರಿಂದ ಕಸದ ಸಮಸ್ಯೆ ಮತ್ತಷ್ಟು ಹೆಚ್ಚಳವಾಗಲಿದೆ. ಹಿಂದೆ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಕೂಡ ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದರು. ನಿಮ್ಮ ಸಮಸ್ಯೆಗಳನ್ನು ಬೆಳಗಾವಿ ಅಧಿವೇಶನದ ನಂತರ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅಧಿವೇಶನ ಮುಗಿದ 6 ತಿಂಗಳಾದರೂ ಕ್ಯಾರೇ ಅಂದಿಲ್ಲ. ಈ ಹಿನ್ನೆಲೆಯಲ್ಲಿ ಕಸದ ಲಾರಿ, ಅಟೋ ಬಂದ್ ಮಾಡಿ ಪ್ರತಿಭಟನೆಗೆ ಕಾರ್ಮಿಕರು ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.