ನವದೆಹಲಿ: 2029ರ ಲೋಕಸಭೆ ಚುನಾವಣೆ ವೇಳೆಗೆ ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ. ರಾಷ್ಟ್ರ ರಾಜಕಾರಣದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವ ಸಲುವಾಗಿ ರೂಪಿಸಲಾದ ಸಂವಿಧಾನ ತಿದ್ದುಪಡಿ ವಿಧೇಯಕ ನಾರಿ ಶಕ್ತಿ ವಂದನ್ ಕಾಯ್ದೆ(ತಿದ್ದುಪಡಿ) ಅಂಗೀಕರಿಸಲು ನಿರ್ಧರಿಸಲಾಗಿದೆ.
ಸಂಸತ್ ಕ್ಷೇತ್ರಗಳನ್ನು ಹೊಸದಾಗಿ ಪುನರ್ ವಿಂಗಡಣೆ ಮಾಡಿದ ಬಳಿಕವೇ ಮಹಿಳೆಯರ ಮೀಸಲಾತಿ ನಿಬಂಧನೆಗಳು ಜಾರಿಗೆ ಬರಲಿವೆ. ಪ್ರಸ್ತುತ, 2026ರವರೆಗೆ ಕ್ಷೇತ್ರ ಪುನರ್ ವಿಂಗಡಣೆಗೆ ತಡೆ ಇದೆ. ಅದಾದ ಬಳಿಕವೂ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಸಬೇಕೆಂದರೆ, ಅದಕ್ಕೆ ಸಾಂವಿಧಾನಿಕ ತಿದ್ದುಪಡಿ ಅಗತ್ಯ. ಅದಕ್ಕೆ ಸಂಸತ್ನ ಉಭಯ ಸದನಗಳ ಒಪ್ಪಿಗೆ ಪಡೆಯುವುದು ಮುಖ್ಯ.
2026ರ ಬಳಿಕ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದಕ್ಕಾಗಿ ಕ್ಷೇತ್ರ ಪುನರ್ ವಿಂಗಡಣೆ ಆಯೋಗವನ್ನು ರಚಿಸಲಾಗುತ್ತದೆ. ಈ ಆಯೋಗವು ರಾಜ್ಯಗಳಿಗೆ ಭೇಟಿ ನೀಡಿ, ಅಭಿಪ್ರಾಯಗಳನ್ನು ಸಂಗ್ರಹಿಸಿ, ಯಾವುದೇ ಬದಲಾವಣೆ ಶಿಫಾರಸು ಮಾಡುವ ಮುನ್ನ ವರದಿಯೊಂದನ್ನು ಸಿದ್ಧಪಡಿಸಬೇಕಾಗುತ್ತದೆ.
ದಕ್ಷಿಣ ರಾಜ್ಯಗಳ ಆಕ್ಷೇಪ
ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಿರುವ ದಕ್ಷಿಣದ ರಾಜ್ಯಗಳು, ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ಸಂಸತ್ ನಲ್ಲಿ ನಮ್ಮಂಥ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗುತ್ತದೆ ಎನ್ನುವ ಕಳವಳ ವ್ಯಕ್ತಪಡಿಸಿವೆ. ಇವರ ಕಳವಳವನ್ನೂ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ದಕ್ಷಿಣದ ರಾಜ್ಯಗಳ ರಾಜಕೀಯ ಪಾಲ್ಗೊಳ್ಳುವಿಕೆಯ ಜತೆ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಾತಿನಿಧ್ಯದಲ್ಲಿ ಸಮಾನತೆ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ. ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.
ತಂತ್ರಜ್ಞಾನ ಆಧರಿತ ಗಣತಿ
ಇದರ ನಡುವೆಯೇ, 2027ರಲ್ಲಿ ದೇಶಾದ್ಯಂತ ಜನಗಣತಿಯೂ ನಡೆಯಲಿದೆ. 2021ರಲ್ಲಿ ನಡೆಯಬೇಕಾಗಿದ್ದ ಗಣತಿಯು ಕೋವಿಡ್ ಸೋಂಕಿನಿಂದಾಗಿ ವಿಳಂಬವಾಗಿದ್ದು, 2027ರಲ್ಲಿ ನಡೆಯುವ ಗಣತಿಯಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಬಳಸಲು ನಿರ್ಧರಿಸಲಾಗಿದೆ. ಆಧಾರ್ ದೃಢೀಕರಣದ ಜೊತೆಗೆ 16 ಭಾರತೀಯ ಭಾಷೆಗಳಲ್ಲಿ ದತ್ತಾಂಶ ಸಂಗ್ರಹಕ್ಕೆ ಅನುಕೂಲವಾಗುವಂತೆ ಮೊಬೈಲ್ ಅಪ್ಲಿಕೇಷನ್ ವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎನ್ನಲಾಗಿದೆ.