ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಂದೇ ದಿನಕ್ಕೆ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.
ಒಂದೇ ರಾತ್ರಿಗೆ ಕೃಷ್ಣಾ ನದಿಗೆ 21ಸಾವಿರ ಕ್ಯೂಸೆಕ್ ನೀರು ಹೆಚ್ಚಳವಾಗಿದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಒಟ್ಟು 92 ಸಾವಿರ ಕ್ಯೂಸೇಕ್ ನೀರು ಹೆಚ್ಚಳವಾಗಿದೆ. ದೂದಗಂಗಾ ಹಾಗೂ ವೇದಗಂಗಾ ನದಿಯ ಒಳಹರಿವಿನಲ್ಲೂ ಹೆಚ್ಚಳವಾಗಿದೆ. ನೀರು ಹೆಚ್ಚಳವಾದ ಪರಿಣಾಮ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿರುವ ಬಂಗಾಲಿ ಬಾಬಾ ದೇವಸ್ಥಾನ ಜಲಾವೃತ್ತಗೊಂಡಿದೆ.
ಇಲ್ಲಿಯವರೆಗೂ ಬರೋಬ್ಬರಿ ಏಳು ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಈಗಾಗಲೇ ಕೃಷ್ಣಾ, ದೂದಗಂಗಾ, ವೇದಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಕೆಳ ಹಂತದ ಏಳು ಸೇತುವೆಗಳು ಜಲಾವೃತಗೊಂಡಿದ್ದು, ಯಥಾಸ್ಥಿತಿಯಲ್ಲಿವೆ.
ದೂದಗಂಗಾ, ವೇದಗಂಗಾ ಹಾಗೂ ಕೃಷ್ಣಾ ನದಿಗೆ ಸೇತುವೆಗಳು ಅಡ್ಡಲಾಗಿವೆ. ದೂದಗಂಗಾ ನದಿಯ ಮಲ್ಲಿಕವಾಡ-ದತ್ತವಾಡ, ಭೋಜ-ಕಾರದಗಾ, ಯಕ್ಸಂಬಾ-ದಾನವಾಡ ಗ್ರಾಮಗಳ ಸಂಪರ್ಕ ಸೇತುವೆ ವೇದಗಂಗಾ ನದಿಯ ಭಾರವಾಡ-ಕುನ್ನೂರು, ಭೋಜವಾಡಿ-ಕುನ್ನೂರು, ಅಕ್ಕೋಳ-ಸಿದ್ನಾಳ. ಕೃಷ್ಣಾ ನದಿಗೆ ಅಡ್ಡಲಾಗಿವೆ. ಯಡೂರು-ಕಲ್ಲೋಳ, ಭಾವನಸೌಂದತ್ತಿ-ಮಾಂಜರಿ ಸೇತುವೆಗಳು ಜಲಾವೃತಗೊಂಡಿವೆ. ಪರ್ಯಾಯ ಮಾರ್ಗಗಳ ಮೂಲಕ ಜನರು ಸಂಚಾರ ಮಾಡುತ್ತಿದ್ದಾರೆ.