ಮಹಾರಾಷ್ಟ್ರ ಸೇರಿದಂತೆ ಬೆಳಗಾವಿ ಭಾಗದಲ್ಲಿ ವರುಣಾರ್ಭಟ ಮುಂದುವರಿದಿದೆ.
ಪರಿಣಾಮ ಘಟಪ್ರಭಾ ನದಿಗೆ ಅಪಾರ ಹರಿವು ಹರಿದು ಬರುತ್ತಿದೆ. ಇದರಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ 17 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಬಾಗಲಕೋಟೆಯ ಮುಧೋಳದ ಸುಪ್ರಸಿದ್ಧ ಮಿರ್ಜಿ ಸೇತುವೆ ಮುಳುಗುವ ಹಂತ ತಲುಪಿದೆ.
ಹೀಗಾಗಿ ಮಿರ್ಜಿ-ಮಹಾಲಿಂಗಪುರ ಸಂಪರ್ಕ ಸಂಪೂರ್ಣ ಸ್ತಬ್ಧವಾಗಿದೆ. ಸೇತುವೆ ಮಟ್ಟಕ್ಕೆ ಉಕ್ಕಿ ಹರಿಯುತ್ತಿರುವ ನದಿ ನೀರಿನ ಆರ್ಭಟ ತೀರದ ಜನರಲ್ಲೂ ಆತಂಕವನ್ನು ಸೃಷ್ಟಿಸಿದೆ. ಈಗಾಗಲೇ ಮುಧೋಳ್ ವ್ಯಾಪ್ತಿಯಲ್ಲಿ 17ಕ್ಕೂ ಹೆಚ್ಚು ಸೇತುವೆಗಳಿಗೆ ಇದೀಗ ಜಲಾವೃತ ಭೀತಿ ಎದುರಾಗಿದೆ. ಹೀಗಾಗಿ ಸಂಚಾರ ವ್ಯವಸ್ಥೆಯೇ ಬುಡಮೇಲಾಗಿದೆ.