ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಬಾಲಿವುಡ್ ಬೆಡಗಿ ತಮನ್ನಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕನ್ನಡ ಪ್ರತಿಭೆಗಳಿದ್ದಾರೆ. ಆದರೂ ಬೇರೆ ಭಾಷಿಕರಿಗೆ ಅವಕಾಶ ನೀಡಿದ್ದು ತಪ್ಪು ಎಂದು ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ KsdL ಎಂಡಿ ಪ್ರಶಾಂತ್ ಸಮರ್ಥನೆ ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಬೆಳವಣಿಗೆ ಆಗಿದೆ. ಕಳೆದ ವರ್ಷ ಸಾಕಷ್ಟು ಬೆಳವಣಿಗೆ ಕಂಡಿದ್ದೇವೆ. ಕನ್ನಡ ನೆಲ, ಜಲ, ಆಶಯ ಗೌರವಿಸುತ್ತೇವೆ. ಮಾರುಕಟ್ಟೆ ಸ್ಟ್ರೇಟಜಿಯಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆ ಗುರುತು ಇಡಬೇಕಾಗುತ್ತೆ. ಆದರೆ, ಪೂಜಾ ಹೆಗ್ಡೆ, ಶ್ರೀ ಲೀಲಾ, ರಶ್ಮಿಕಾ ಅವರನ್ನು ಕೂಡ ಸಂಪರ್ಕಿಸಲು ಯತ್ನಿಸಲಾಗಿತ್ತು ಎಂದು ಸಬೂಬು ನೀಡಿದ್ದಾರೆ.

ಅವರೆಲ್ಲ ಬೇರೆ ಬೇರೆ ಪ್ರಾಜೆಕ್ಟ್ ನಲ್ಲಿ ಎಂಗೇಜ್ ಆಗಿದ್ದರು. ತಮನ್ನಾಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಫ್ಯಾನ್ ಬೇಸ್ ಸಿಕ್ಕಾಪಟ್ಟೆ ಇದೆ. ಹೀಗಾಗಿ ಪ್ಯಾನ್ ಇಂಡಿಯಾ ನಟಿ ಹುಡುಕಲಾಯಿತು. ಮೈಸೂರು ಸ್ಯಾಂಡಲ್ ಸೋಪ್ ಗೆ ಸಂಬಂಧಿಸಿದಂತೆ ಶೇ. 90ರಷ್ಟು ಜಾಬ್ ಕನ್ನಡಿಗರಿಗೆ ಕೊಟ್ಟಿದ್ದೇವೆ. ಕನ್ನಡ ನೆಲ, ಜಲದ ವಿಚಾರ ಬಂದಾಗ ಯಾವುದೇ ರಾಜಿ ಆಗಲ್ಲ. ಕನ್ನಡಿಗರು ಯಾವಾಗಲೂ ಸಂಸ್ಥೆ ಬೆಳೆಸಿದ್ದಾರೆ ಎಂದು ಹೇಳಿದ್ದಾರೆ.