ನವದೆಹಲಿ: ಕಳೆದ ವರ್ಷದ ಜನವರಿಯಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಧಿಕಾರಾವಧಿ ಅಂತ್ಯವಾಗಿದೆ. ಆದರೆ, ಅಂದಿನಿಂದ ಇಂದಿನವರೆಗೂ ನಡ್ಡಾರನ್ನೇ ಹುದ್ದೆಯಲ್ಲಿ ಮುಂದೂಡಿಕೊಂಡು ಬರಲಾಗುತ್ತಿದೆ. ಹಾಗಂತಾ ಮುಂದಿನ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ನಡೆದಿಲ್ಲಾ ಅಂತಲ್ಲ. ಕಳೆದ 1 ವರ್ಷಗಳ ಆಡಳಿತಾವಧಿಯಲ್ಲಿ ಇದೇ ಮೊದಲ ಬಾರಿಗೆ ಮೊನ್ನೆಯಷ್ಟೇ ಪ್ರಧಾನಿ ಮೋದಿ ನಾಗ್ಪುರದ ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ಈ ಭೇಟಿ ಬೆನ್ನಲ್ಲೇ ಇದೀಗ ನೂತನ ಅಧ್ಯಕ್ಷರ ಆಯ್ಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ಮೋದಿ-ಶಾಗೆ ಟಕ್ಕರ್ ಕೊಡಲು ತಯಾರಿ?
ಈ ಹಿಂದೆಯೇ ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಒಂದು ಸಂದೇಶ ರವಾನಿಸಿದ್ದರು. ಪಕ್ಷದಲ್ಲಿ ವ್ಯಕ್ತಿ ಪೂಜೆ ಬೇಡವೇ ಬೇಡ ಅಂತಾ ವಾರ್ನಿಂಗ್ ಮಾಡಿದ್ದರು. ಈ ಬಾರಿ ಅಧ್ಯಕ್ಷರ ಆಯ್ಕೆಯಲ್ಲೂ ಮೋದಿ-ಅಮಿತ್ ಶಾರನ್ನು ಹೊರಗಿಟ್ಟು ಸಂಘ ನಿಷ್ಠನಿಗೆ ಪಟ್ಟ ಕಟ್ಟುವ ಕಸರತ್ತನ್ನು ಆರೆಸ್ಸೆಸ್ ಪ್ಲ್ಯಾನ್ ಮಾಡಿದೆ ಎನ್ನಲಾಗುತ್ತಿದೆ. ಅದರಲ್ಲಿಯೂ ಮೋದಿ-ಶಾಗೆ ನಿಷ್ಠನಾಗಿರುವ ವ್ಯಕ್ತಿಯ ಬದಲು ಸಂಘದ ಆಜ್ಞೆ ಪಾಲಿಸುವ ವ್ಯಕ್ತಿಗೆ ಮನ್ನಣೆ ನೀಡುವ ಯತ್ನ ನಡೆಯುತ್ತಿದೆ ಎನ್ನಲಾಗಿದೆ.
ಏಪ್ರಿಲ್ ಅಂತ್ಯಕ್ಕೆ ನೂತನ ಅಧ್ಯಕ್ಷರ ಆಯ್ಕೆ?
ಕಳೆದ ಜನವರಿಯಲ್ಲೇ ನೂತನ ಅಧ್ಯಕ್ಷರ ಆಯ್ಕೆ ನಡೆಯಬೇಕಿತ್ತು. ಆದರೆ, ಅದನ್ನು ಮುಂದೂಡುತ್ತಲೇ ಬರಲಾಗುತ್ತಿದೆ. ಮೊನ್ನೆಯ ಮೋದಿ ನಾಗ್ಪುರ ಭೇಟಿ ವೇಳೆ ಆಯ್ಕೆ ಬಗ್ಗೆ ಸಂಘದ ನಾಯಕರು ಸಮಾಲೋಚಿಸಿದ್ದಾರೆ. ನಾಲ್ವರು ಮುಖಂಡರ ಪೈಕಿ ಒಬ್ಬರಿಗೆ ಜಾಕ್ ಪಾಟ್ ಹೊಡೆಯುವ ಸಾಧ್ಯತೆಗಳಿವೆ. ಅದರಲ್ಲೂ ಸಂಘದ ಅನುಯಾಯಿ ಮಹಾರಾಷ್ಟ್ರದ ಮಾಜಿ ಮಂತ್ರಿ ವಿನೋದ್ ತಾವಡೆ ಹೆಸರು ಮೊದಲಿನಲ್ಲಿದೆ. ಸಂಘ ಬಂಟ ಅನ್ನೋ ಇಮೇಜ್ ಅವರನ್ನ ಕುರ್ಚಿ ಮೇಲೆ ಕೂರಿಸುವ ಸಾಧ್ಯತೆಗಳಿವೆ. ಇನ್ನು ಎರಡನೇ ಸಾಧ್ಯತೆಗಳಲ್ಲಿ ತೆಲಂಗಾಣದ ಬಿಜೆಪಿ ಮಾಜಿ ಅಧ್ಯಕ್ಷ ಕೆ. ಲಕ್ಷ್ಮಣ್ ಹೆಸರೂ ಚಾಲ್ತಿಯಲ್ಲಿದೆ. ಲಕ್ಷ್ಮಣ್ ಗೂ ಆರೆಸ್ಸೆಸ್ ಶ್ರೀರಕ್ಷೆಯಿದೆ. ಉಳಿದಂತೆ ಉತ್ತರ ಪ್ರದೇಶದ ವರ್ಚಸ್ಸಿನ ನಾಯಕ ಸುನಿಲ್ ಬನ್ಸಲ್ ಗೂ ಅದೃಷ್ಟ ಖುಲಾಯಿಸುವ ಸಾಧ್ಯತೆಗಳಿವೆ. ರಾಜಸ್ಥಾನ ಮೂಲದ ಓಂ ಮಾಥೂರ್ ಕೂಡ ಅಧ್ಯಕ್ಷರಾಗುವ ರೇಸ್ ನಲ್ಲಿದ್ದಾರೆ.
ಅಧ್ಯಕ್ಷ ಗಾದಿಗೇರ್ತಾರಾ ಮೊದಲ ಮಹಿಳಾ ಮಣಿ?
ಬುಡಕಟ್ಟು ಸಮುದಾಯದ ದ್ರೌಪತಿ ಮುರ್ಮುರನ್ನು ರಾಷ್ಟ್ರಪತಿ ಪಟ್ಟಕೇರಿಸುವ ಮೂಲಕ ಶಾಕ್ ನೀಡಿತ್ತು ಮೋದಿ-ಅಮಿತ್ ಶಾ ಜೋಡಿ. ಇಂಥದ್ದೇ ಲೆಕ್ಕ ತಲೆಕೆಳಗಾಗೋ ಗಣಿತ ಮತ್ತೆ ನಡೆದಿದೆಯಾ ಅನ್ನೋ ಚರ್ಚೆ ನಡೆದಿದೆ. ಬಿಜೆಪಿ ಅಧ್ಯಕ್ಷ ಹುದ್ದೆಗೆ ಇದೇ ಮೊದಲ ಬಾರಿ ಮಹಿಳೆಯೊಬ್ಬರನ್ನು ನೇಮಿಸುವ ಲೆಕ್ಕಾಚಾರಗಳೂ ನಡೆದಿವೆ. ಅದರಲ್ಲಿಯೂ ಗಾಂಧಿ ಕುಟುಂಬದ ತವರಲ್ಲೇ ಮಣಿಸಿದ್ದ ಸ್ಮೃತಿ ಇರಾನಿಯವರನ್ನು ಅಧ್ಯಕ್ಷರಾಗಿಸುವ ಒಂದು ತಂತ್ರಗಾರಿಕೆಯೂ ನಡೆದಿದೆ. ಆದರೆ, ಅಂತಿಮವಾಗಿ ಯಾರಾಗ್ತಾರೆ ಎನ್ನುವುದನ್ನು ಕಾಯ್ದು ನೋಡಬೇಕಿದೆ.