ಗುವಾಹಟಿ: ಚೀನಾವೇನಾದರೂ ಬ್ರಹ್ಮಪುತ್ರ ನದಿಯ ನೀರನ್ನು ನಿಲ್ಲಿಸಿದರೆ ಭಾರತವೇನು ಮಾಡುತ್ತದೆ ಎಂಬ ಪ್ರಶ್ನೆಯ ಮೂಲಕ ಭಾರತವನ್ನು ಬೆದರಿಸಲು ಹೊರಟಿರುವ ಪಾಕಿಸ್ತಾನಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರ್ಮಾ ತಿರುಗೇಟು ನೀಡಿದ್ದಾರೆ. ಭಾರತವು 1960ರ ಸಿಂಧೂ ನೀರು ಒಪ್ಪಂದವನ್ನು (Indus Waters Treaty) ಸ್ಥಗಿತಗೊಳಿಸಿರುವ ಕಾರಣಕ್ಕೆ ಪಾಕಿಸ್ತಾನವು ಈ ಹೊಸ “ಕಾಲ್ಪನಿಕ ಭಯ”ವನ್ನು ಹುಟ್ಟುಹಾಕಿದೆ ಎಂದು ಅವರು ಟೀಕಿಸಿದ್ದಾರೆ.
ಅಲ್ಲದೇ, “ಭಾರತವು ಸಿಂಧೂ ನೀರು ಒಪ್ಪಂದದಿಂದ ನಿರ್ಣಾಯಕವಾಗಿ ಹಿಂದೆ ಸರಿದ ನಂತರ, ಪಾಕಿಸ್ತಾನವು ಈಗ ಮತ್ತೊಂದು ಕೃತಕ ಭಯವನ್ನು ರೂಪಿಸುತ್ತಿದೆ: ‘ಬ್ರಹ್ಮಪುತ್ರದ ನೀರನ್ನು ಭಾರತಕ್ಕೆ ಹರಿಯದಂತೆ ಚೀನಾ ನಿಲ್ಲಿಸಿದರೆ ಏನಾಗಬಹುದು?'” ಎಂದು ಪಾಕ್ ಪ್ರಶ್ನಿಸಿದೆ. ಬ್ರಹ್ಮಪುತ್ರ ನದಿಯು ಭಾರತದಲ್ಲಿ ಬೆಳೆಯುತ್ತಾ ಸಾಗುವ ನದಿ. ಬ್ರಹ್ಮಪುತ್ರವು ಒಂದು ಮೂಲದಿಂದ ನಿಯಂತ್ರಿಸಲ್ಪಟ್ಟದ್ದಲ್ಲ. ಚೀನಾದ ನಿಯಂತ್ರಣದಲ್ಲಿರುವುದು ಬ್ರಹ್ಮಪುತ್ರದ ಶೇ.30-35ರಷ್ಟು ಹರಿವು ಮಾತ್ರ. ಉಳಿದ ಶೇ.65-70ರಷ್ಟು ಭಾರತದಲ್ಲೇ ಮುಂಗಾರು ಮಳೆಯಿಂದ, ಅದರ ಉಪನದಿಗಳಿಂದ ಮತ್ತು ಖಾಸಿ, ಗಾರೋ, ಜೈಂತಿಯಾ ಹಿಲ್ಸ್ ನ ಹೆಚ್ಚುವರಿ ಒಳಹರಿವಿನಿಂದ ಉತ್ಪತ್ತಿಯಾಗುತ್ತದೆ” ಹಿಮಾಂತ ಬಿಸ್ವಾ ಸರ್ಮಾ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವರ ಹಿರಿಯ ಸಹಾಯಕ ರಾಣಾ ಇಹ್ಸಾನ್ ಅಫ್ಜಲ್, ಭಾರತದ ಸಿಂಧೂ ನೀರು ಒಪ್ಪಂದದ ಸ್ಥಗಿತಗೊಳಿಸುವಿಕೆಯನ್ನು ಉಲ್ಲೇಖಿಸಿ, ಚೀನಾ ಕೂಡ ತನ್ನ ಮಿತ್ರರಾಷ್ಟ್ರಕ್ಕಾಗಿ ಬ್ರಹ್ಮಪುತ್ರ ನದಿಯ ಹರಿವನ್ನು ನಿಲ್ಲಿಸಬಹುದು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಸರ್ಮಾ, ಚೀನಾದಿಂದ ಯಾವುದೇ ಅಧಿಕೃತ ಧಮ್ಕಿ ಬಂದಿಲ್ಲ. ಪಾಕಿಸ್ತಾನವು ಸುಳ್ಳನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ.
ಬ್ರಹ್ಮಪುತ್ರ ನದಿಯು ಒಂದೇ ಮೂಲದಿಂದ ನಿಯಂತ್ರಿತವಾಗಿಲ್ಲ, ಬದಲಿಗೆ ಭಾರತದ ಭೌಗೋಳಿಕತೆ, ಮುಂಗಾರು ಮತ್ತು ನಮ್ಮ ಸಂಸ್ಕೃತಿಯ ದೃಢತೆಯಿಂದ ಶಕ್ತಿಯನ್ನು ಪಡೆಯುತ್ತದೆ. ಅದು ವಿದೇಶಿ ಮೂಲಗಳನ್ನು ಅವಲಂಬಿಸಿಲ್ಲ” ಎಂದೂ ತಿಳಿಸಿದ್ದಾರೆ.