ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಕದನವಿರಾಮ ಏರ್ಪಟ್ಟಿದೆ. ಗಡಿಯಲ್ಲಿ 19 ದಿನಗಳ ಬಳಿಕ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. ಭಾರತದ ಪ್ರತಿದಾಳಿಗೆ ಪತರಗುಟ್ಟಿರುವ ಪಾಕಿಸ್ತಾನವು ಮಗುಮ್ಮಾಗಿ ಕುಳಿತಿದೆ. ಇದರ ಬೆನ್ನಲ್ಲೇ, ಕದನವಿರಾಮ ಕುರಿತಂತೆ ಮೇ 9ರಂದು ಅಮೆರಿಕ ಉಪಾಧ್ಯಕ್ಷ ಜೆ.ಡೆ.ವ್ಯಾನ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದಾಗ, ಮೋದಿ ಅವರು ನೀಡಿದ ಉತ್ತರ ಏನಾಗಿತ್ತು ಎಂಬುದು ವರದಿಗಳ ಮೂಲಕ ಬಯಲಾಗಿದೆ.
“ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡಿದರೆ, ನಾವು ಸುಮ್ಮನೆ ಕೂರುವುದಿಲ್ಲ. ಇಸ್ಲಾಮಾಬಾದ್ ಹಿಂದೆಂದೂ ಕಂಡು ಕೇಳರಿಯದ ರೀತಿಯ ಪರಿಣಾಮವನ್ನು ಎದುರಿಸುತ್ತದೆ. ನಾವು ಯಾವುದೇ ಒತ್ತಡಕ್ಕೆ ಮಣಿಯದೆ ಪಾಕಿಸ್ತಾನದ ಮೇಲೆ ಪ್ರಬಲವಾಗಿ ದಾಳಿ ಮಾಡುತ್ತೇವೆ. ಇದರ ಬಗ್ಗೆ ನಮ್ಮ ವಿಚಾರಗಳು ಸ್ಪಷ್ಟವಾಗಿವೆ” ಎಂಬುದಾಗಿ ವ್ಯಾನ್ಸ್ ಕರೆ ಮಾಡಿದ್ದಾಗ ಮೋದಿ ಅವರು ಸ್ಪಷ್ಟ ಉತ್ತರ ನೀಡಿದ್ದರು ಎಂಬುದಾಗಿ ವರದಿಗಳು ತಿಳಿಸಿವೆ.
“ಪಾಕಿಸ್ತಾನವು ಇತಿಹಾಸದಿಂದ ಪಾಠ ಕಲಿತಿಲ್ಲ. ಆದರೆ, ಈಗ ಭಾರತವು ಯಾವುದೇ ಆಕ್ರಮಣಕಾರಿ ಚಟುವಟಿಕೆಗಳನ್ನು ನೋಡಿಕೊಂಡು ಸುಮ್ಮನಿರುವ ಸ್ಥಿತಿಯಲ್ಲಿ ಇಲ್ಲ. ಪಾಕಿಸ್ತಾನಕ್ಕೆ ಪಾಠ ಕಲಿಸಲು ನಾವು ಯಾವ ರೀತಿಯ ದಾಳಿಯನ್ನು ಬೇಕಾದರೂ ಸಿದ್ಧರಿದ್ದೇವೆ. ಇದನ್ನು ಪಾಕಿಸ್ತಾನಕ್ಕೆ ಮನವರಿಕೆ ಮಾಡಿ. ಇಲ್ಲವೇ ಅವರೇ ಇದನ್ನು ಅರ್ಥ ಮಾಡಿಕೊಂಡರೆ ಇನ್ನೂ ಒಳ್ಳೆಯದು” ಎಂಬುದಾಗಿ ಮೋದಿ ಹೇಳಿದ್ದರು ಎಂದು ತಿಳಿದುಬಂದಿದೆ.
ಏಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತವು ಮೇ 7ರಿಂದ ನಿರಂತರವಾಗಿ ಪಾಕಿಸ್ತಾನದ ಉಗ್ರರು, ವಾಯುನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಧ್ವಂಸಗೊಳಿಸಿತು. ಇದಾದ ಬಳಿಕ ಪಾಕಿಸ್ತಾನವು ಅಮೆರಿಕದ ಮಧ್ಯೆಸ್ಥಿಕೆಗೆ ಅಂಗಲಾಚಿತು. ಕೊನೆಗೆ ಭಾರತ ಕೂಡ ಕದನವಿರಾಮ ಘೋಷಣೆ ಮಾಡಿದೆ. ಆದರೆ, ಪಾಕ್ ದಾಳಿ ಮಾಡಿದರೆ ಪ್ರತಿದಾಳಿ ನಿಶ್ಚಿತ ಎಂಬ ಸಂದೇಶವನ್ನಂತೂ ರವಾನಿಸಿದೆ.