ಬೆಂಗಳೂರು: ಕೆ.ಆರ್.ಪುರಂನಲ್ಲಿ ಮಂಗಳಮುಖಿ ತನುಶ್ರೀ ಹತ್ಯೆ ಪ್ರಕರಣಕ್ಕೆ ಸಂಭಂಧಪಟ್ಟಂತೆ ಮೂವರು ಆರೋಪಿಗಳನ್ನು ಕೆ.ಆರ್ ಪುರಂ ಪೊಲೀಸರು ಬಂಧಿಸಿದ್ದಾರೆ.
ಜಗದೀಶ್, ಪ್ರಭಾಕರ್ ಹಾಗೂ ಸುಶಾಂತ್ ಬಂಧಿತ ಆರೋಪಿಗಳು ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆ ವೇಳೆ ಜಗದೀಶ್ ಕೊಲೆ ಮಾಡಿರುವುದು ಬಯಲಾಗಿದೆ. ಸೋಷಿಯಲ್ ಸರ್ವೀಸ್ ಮಾಡುತ್ತಿದ್ದಾಗ ಜಗದೀಶ್, ತನುಶ್ರೀಗೆ ಪರಿಚಯವಾಗಿದ್ದ. ಹೀಗಾಗಿ ತನುಶ್ರೀ ಮತ್ತು ಜಗದೀಶ್ ಮಧ್ಯೆ ಸ್ನೇಹ ಬೆಳೆದಿತ್ತು.
ಒಂದೆರೆಡು ಬಾರಿ ಸೋಷಿಯಲ್ ಸರ್ವೀಸ್ ಉದ್ದೇಶದಿಂದ ಇಬ್ಬರು ಒಟ್ಟಿಗೆ ಪ್ರಯಾಣಿಸಿದ್ದರು. ಹೀಗಾಗಿ ಇಬ್ಬರೂ ಆತ್ಮೀಯರಾಗಿದ್ದರು. ಆಗಾಗ ತನುಶ್ರೀ ಮನೆಗೆ ಜಗದೀಶ್ ಬರುತ್ತಿದ್ದ. ತನುಶ್ರೀ ಬಲವಂತವಾಗಿ ಜಗದೀಶ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳಂತೆ. ತನುಶ್ರೀ ಕಾಟಕ್ಕೆ ಬೇಸತ್ತು ಕೊಲೆ ಮಾಡಲು ಜಗದೀಶ್ ನಿರ್ಧಾರ ಮಾಡಿದ್ದಾನೆ ಎನ್ನಲಾಗಿದೆ.
ಧೈರ್ಯಕ್ಕಾಗಿ ತನ್ನಿಬ್ಬರು ಸ್ನೇಹಿತರನ್ನ ಜೊತೆಯಲ್ಲಿ ಇರುವುದಕ್ಕೆ ಕರೆತಂದಿದ್ದ ಎನ್ನಲಾಗಿದೆ. ಏ. 17ರ ರಾತ್ರಿ ಮನೆಗೆ ಬಂದು ತನುಶ್ರೀಗೆ ಚಾಕು ಇರಿದು ಹತ್ಯೆ ಮಾಡಿದ್ದಾರೆ. ಹತ್ಯೆ ಬಳಿಕ ಪ್ಲಾನ್ನಂತೆ ಎಸ್ಕೇಪ್ ಆಗಿದ್ದಾರೆ. ಕೊಲೆ ಮಾಡಲು ಇಬ್ಬರು ಸ್ನೇಹಿತರು ಕೂಡ ಜಗದೀಶ್ ಗೆ ಸಾಥ್ ನೀಡಿರುವುದು ಬೆಳಕಿಗೆ ಬಂದಿದ್ದು, ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.