ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅನ್ನೋದು ಕೇವಲ ಕಪೋಲ ಕಲ್ಪಿತ. ಇದೊಂದು ಅರ್ಥಹೀನ ಚರ್ಚೆ ಅಂತಾ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ, ಪ್ರತಿಯೊಬ್ಬ ಶಾಸಕರ ಅಭಿಪ್ರಾಯವನ್ನೂ ಸಂಗ್ರಹಿಸಲಾಗುತ್ತಿದೆ. ಅವರ ಕ್ಷೇತ್ರಗಳ ಕುಂದುಕೊರತೆಗಳು, ಅಗತ್ಯವಿರುವ ಅನುದಾನ, ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ನಿಟ್ಟಿನಲ್ಲೇ ಎರಡು ಹಂತದಲ್ಲಿ ಕಾಂಗ್ರೆಸ್ ಶಾಸಕರೊಟ್ಟಿಗೆ ಚರ್ಚೆ ನಡೆಸಲಿದ್ದೇವೆ. ಅಷ್ಟೇ ಅಲ್ಲಾ, ಪ್ರತಿಯೊಬ್ಬರ ಸಲಹೆ, ಸೂಚನೆ ಮತ್ತು ಸಮಸ್ಯೆಗಳನ್ನೂ ಆಲಿಸಲಾಗುತ್ತೆ.
ಇದು ಕೇವಲ ಶಾಸಕರಿಗೆ ಸೀಮಿತವಾಗಿಲ್ಲ ಬದಲಿಗೆ, ಸಂಸದರು, ಎಂಎಲ್ ಸಿಗಳು, ಪರಾಜಿತ ಅಭ್ಯರ್ಥಿಗಳು ಸೇರಿದಂತೆ ಡಿಸಿಸಿ ಅಧ್ಯಕ್ಷರೊಟ್ಟಿಗೂ ಚರ್ಚೆ ನಡೆಸಲಾಗುತ್ತದೆ. ಮುಂದಿನ ಒಂದರಿಂದ ಒಂದೂವರೆ ತಿಂಗಳ ಅವಧಿಯಲ್ಲಿ ನಾನು ಈ ಎಲ್ಲರೊಟ್ಟಿಗೂ ಚರ್ಚಿಸುತ್ತೇನೆ. ಹಾಗಂತಾ ಪಕ್ಷದಲ್ಲಿ ಅಸಮಾಧಾನವಿದೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸುರ್ಜೇವಾಲ, ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಲಾಗುತ್ತೆ ಅಂತಾ ಸ್ಪಷ್ಟಪಡಿಸಿದ್ದಾರೆ.