ಬೆಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ ಐಎಗೆ ಕೊಡುವ ವಿಚಾರವಾಗಿ ಕೇಂದ್ರದಿಂದ ಪತ್ರ ಬಂದಿದೆ. ನಮ್ಮ ಪೊಲೀಸರು ಕೂಡ ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಕೇಂದ್ರ ಗೃಹ ಇಲಾಖೆಯಿಂದ ಪತ್ರ ಬಂದಿದೆ. ಈ ಪತ್ರದ ಬಗ್ಗೆ ಇಂದು ಸಭೆ ನಡೆಸುತ್ತೇನೆ. NIAಗೆ ಪ್ರಕರಣ ನೀಡಬೇಕಾ? ಬೇಡವಾ? ಎಂದು ನಿರ್ಧಾರ ಮಾಡುತ್ತೇವೆ. ಎನ್ ಐಎಗೆ ಯಾರು ರೆಫರ್ ಮಾಡಿದ್ದಾರೆ ಎಂಬುವುದು ಗೊತ್ತಿಲ್ಲ. ಅವರು ಪ್ರಕರಣ ವರ್ಗಾಯಿಸುವಂತೆ ಕೇಳಿದ್ದಾರೆ. ನಮ್ಮ ಪೊಲೀಸ್ ಕೂಡ ಸಮರ್ಥವಾಗಿ ತನಿಖೆ ಮಾಡುತ್ತಿದೆ. ಯಾವ ಆಧಾರದ ಮೇಲೆ ವರ್ಗಾವಣೆಗೆ ಕೇಳಿದ್ದರೆ ಅಂತ ಗೊತ್ತಿಲ್ಲ. ಇಂದು ಚರ್ಚೆ ನಡೆಸಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಗೃಹ ಖಾತೆ ಬದಲಾವಣೆಗೆ ಒತ್ತಾಯಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಫೇಕ್ ಸುದ್ದಿ ಎಂದು ಗರಂ ಆಗಿದ್ದಾರೆ. ನಾನು ಖಾತೆ ಬದಲಾವಣೆಗೆ ಕೇಳಿದ್ದೇನೆ ಅಂತ ಯಾರು ಹೇಳಿದ್ದಾರೆ? ಯಾವ ಸೋರ್ಸ್ ಆಧಾರ ಮೇಲೆ ಸುದ್ದಿಯಾಗಿದೆ? ನನ್ನ ನೇರವಾಗಿ ಕೇಳಬೇಕಿತ್ತಲ್ಲ. ಅದು ಬಿಟ್ಟು ಸಿಎಂ ಬಳಿ ಖಾತೆ ಬದಲಾವಣೆಗೆ ಕೇಳಿದ್ದಾರೆ ಎಂಬ ಸುದ್ದಿ ಹೋಗಿದೆ.
ನಮ್ಮ ಬೆಂಬಲಿಗರು ಇರುತ್ತಾರೆ. ಅವರಿಗೆ ಈ ರೀತಿ ಮೆಸೆಜ್ ಹೋದರೆ ಹೇಗೆ? ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ. ಕಾಲ್ತುಳಿತ ಪ್ರಕರಣ ನಮಗೆ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ನಾವು ಖಾತೆ ಬದಲಾವಣೆ ಕೇಳುವುದು ಸರಿಯಲ್ಲ. ಈ ಸಂದರ್ಭವನ್ನು ನಾವು ಗಟ್ಟಿಯಾಗಿ ಎದುರಿಸಬೇಕು. ನಾನು ಖಾತೆ ಬದಲಾವಣೆಗೆ ಕೇಳಿದ್ದೇನೆ ಅನ್ನುವುದು ಸುಳ್ಳು, ಸುಳ್ಳು, ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವರಿಗೆ ವಿಧಾನಸೌಧದ ಪ್ರಕರಣ ಇಷ್ಟ ಇರಲಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆರಂಭವಾಗಿದೆ. ತನಿಖೆ ನಡೆಯುತ್ತಿರುವಾಗ ಮಾತನಾಡುವುದು ಸರಿಯಲ್ಲ. ತನಿಖೆಯ ದಿಕ್ಕು ತಪ್ಪಿಸಿದಂತಾಗುತ್ತದೆ. ತನಿಖೆ ವೇಳೆ ಏನಾಗಿದೆ ಎಂಬುವುದರ ಕುರಿತು ಮಾಹಿತಿ ಪಡೆಯುತ್ತೇನೆ. ಪ್ರಕರಣದ ಬಗ್ಗೆ ರಾಹುಲ್ ಗಾಂಧಿ ನನಗೆ ಕರೆ ಮಾಡಿಲ್ಲ. ಕೆಲವು ಹೈಕಮಾಂಡ್ ನಾಯಕರು ಚರ್ಚೆ ಮಾಡಿದ್ದಾರೆ. ನಮ್ಮ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಕರೆ ಮಾಡಿದ್ದರು. ಅವರನ್ನು ಬಿಟ್ಟರೆ ಯಾರೂ ಕರೆ ಮಾಡಿಲ್ಲ ಎಂದಿದ್ದಾರೆ.