ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಮಂದಿ ಅಮಾಯಕ ಪ್ರವಾಸಿಗರನ್ನು ಬಲಿಪಡೆದುಕೊಂಡ ಉಗ್ರರಿಗೆ ಆಶ್ರಯ ನೀಡಿದ ಪಾಕಿಸ್ತಾನದ ವಿರುದ್ಧ ಯುದ್ಧ ಆರಂಭವಾಗಿದೆ. ಮಂಗಳವಾರ ತಡರಾತ್ರಿ 2 ಗಂಟೆಯ ಸುಮಾರಿಗೆ ಭಾರತೀಯ ಸೇನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಏಕಾಏಕಿ ಕ್ಷಿಪಣಿ ದಾಳಿ ನಡೆಸಿದೆ. ಆಕ್ರಮಿತ ಕಾಶ್ಮೀರದ 9 ಸ್ಥಳಗಳನ್ನು ಗುರಿಯಾಗಿಸಿಕೊಂಡು ನಿಖರ ದಾಳಿ ನಡೆಸಲಾಗಿದೆ.
“ಆಪರೇಷನ್ ಸಿಂಧೂರ್” ಎಂಬ ಹೆಸರಿನಲ್ಲಿ ಭಾರತೀಯ ಸೇನೆಯು ಈ ಕಾರ್ಯಾಚರಣೆ ನಡೆಸಿದ್ದು, ಪ್ರತೀಕಾರದ ದಾಳಿ ಆರಂಭಿಸಿದೆ. ದೇಶಾದ್ಯಂತ ಬುಧವಾರ 300ರಷ್ಟು ಸ್ಥಳಗಳಲ್ಲಿ ಯುದ್ಧದ ಅಣಕು ಕವಾಯತು ಆರಂಭವಾಗುವುದಕ್ಕೂ ಮುನ್ನವೇ ಯುದ್ಧ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಕ್ಷಿಪಣಿಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳನ್ನು ಅಪ್ಪಳಿಸಿವೆ. ಪಾಕಿಸ್ತಾನದ ಸೇನಾ ಕಟ್ಟಡಗಳು, ಸೇನಾ ಮೂಲಸೌಕರ್ಯಗಳಿಗೆ ಹಾನಿಯಾಗದಂತೆ ಉಗ್ರರ ತಾಣಗಳನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಲಾಗಿದೆ. ಮುರಿಡ್ಕೆ, ಕೋಟ್ಲಿ, ಮುಜಾಫ್ಫರಾಬಾದ್ ಮತ್ತು ಬಹಾವಲ್ಪುರದ ಮೇಲೆ ನೆಲದಿಂದ ಆಗಸಕ್ಕೆ ಹಾರುವ ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ. ಒಟ್ಟಾರೆ 9 ಪ್ರದೇಶಗಳನ್ನು ಟಾರ್ಗೆಟ್ ಮಾಡಿರುವುದಾಗಿ ಮೂಲಗಳು ಹೇಳಿವೆ. ದಾಳಿ ನಡೆಯುತ್ತಿದ್ದಂತೆಯೇ ಎರಡೂ ದೇಶಗಳಲ್ಲಿ ಆತಂಕ, ಗೊಂದಲ, ಭಯದ ವಾತಾವರಣ ಸೃಷ್ಟಿಯಾಗಿದೆ.
ಉಗ್ರ ಮಸೂದ್ ಅಜರ್ ಮದರಸಾಗೆ ಹಾನಿ:
ಭಾರತೀಯ ಸೇನೆ ನಡೆಸಿದ ಟಾರ್ಗೆಟೆಡ್ ದಾಳಿಯಲ್ಲಿ ಜೈಶ್ ಎ ಮೊಹಮ್ಮದ್ ಉಗ್ರ ಮಸೂದ್ ಅಜರ್ ಗೆ ಸೇರಿರುವ ಮದರಸಾಗೂ ಹಾನಿಯಾಗಿದೆ ಎಂದು ವರದಿ ಹೇಳಿದೆ. ಲಾಹೋರ್ ಸಮೀಪದ ಮರ್ಡೈಕ್ ಮಸೀದಿಗೂ ಕ್ಷಿಪಣಿ ಅಪ್ಪಳಿಸಿದೆ. ಇದು ಕೂಡ ಮಸೂದ್ಗೆ ಸೇರಿರುವ ಮಸೀದಿ ಎಂದು ಹೇಳಲಾಗಿದೆ.
ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
ಇದರ ಬೆನ್ನಲ್ಲೇ ಶ್ರೀನಗರ, ದೆಹಲಿ ಸೇರಿದಂತೆ ಭಾರತದ ಹಲವೆಡೆ ಹೈಅಲರ್ಟ್ ಘೋಷಿಸಲಾಗಿದೆ. ಭಾರತೀಯ ಸೇನೆ ರಾತ್ರೋರಾತ್ರಿ ನಡೆಸಿದ ಈ ದಾಳಿಯನ್ನು ಪಾಕಿಸ್ತಾನ ಸರ್ಕಾರವೂ ದೃಢಪಡಿಸಿದೆ. ಪಹಲ್ಗಾಮ್ ದಾಳಿ ನಡೆದ 2 ವಾರಗಳಲ್ಲೇ ಈ ಪ್ರತಿದಾಳಿ ನಡೆದಿದ್ದು, ನ್ಯಾಯ ಒದಗಿಸಿದ್ದೇವೆ ಎಂದು ಸೇನೆ ಟ್ವೀಟ್ ಮಾಡಿದೆ.