ನವದೆಹಲಿ : ದೇಶದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿರುವ ವಕ್ಫ್ (ತಿದ್ದುಪಡಿ) ಕಾಯ್ದೆಯಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿದೆ.
ಈ ಕಾಯ್ದೆ ಇಂದಿನಿಂದಲೇ (ಏಪ್ರಿಲ್ 8ರಂದು) ಜಾರಿಗೆ ಬಂದಿದೆ. ಈ ಕಾಯ್ದೆಯು ವಕ್ಫ್ ಆಸ್ತಿಗಳ ಆಡಳಿತ ಮತ್ತು ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ತರುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಹೇಳಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ (ಏಪ್ರಿಲ್ 5) ಈ ಮಸೂದೆಗೆ ಒಪ್ಪಿಗೆ ನೀಡಿದ ನಂತರ, ಕೇಂದ್ರ ಸರ್ಕಾರವು ಮಂಗಳವಾರ (ಏಪ್ರಿಲ್ 8) ಅಧಿಸೂಚನೆ ಹೊರಡಿಸಿ ಕಾಯ್ದೆಯನ್ನು ಜಾರಿಗೊಳಿಸಿದೆ.
ವಕ್ಫ್ (ತಿದ್ದುಪಡಿ) ಕಾಯ್ದೆ 2025 ರ ಪ್ರಕಾರ, 1995ರ ವಕ್ಫ್ ಕಾಯ್ದೆಯಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. “ಯೂನಿಫೈಡ್ ವಕ್ಫ್ ಮ್ಯಾನೇಜ್ಮೆಂಟ್ ಎಂಪವರ್ಮೆಂಟ್, ಎಫಿಷಿಯೆನ್ಸಿ ಆಂಡ್ ಡೆವಲಪ್ಮೆಂಟ್ (ಉಮೀದ್)” ಕಾಯ್ದೆ ಎಂದು ಕರೆಯಲಾಗುತ್ತಿದೆ.
ಈ ಕಾಯ್ದೆಯು ಸಂಸತ್ನಲ್ಲಿ ಅಂಗೀಕಾರಗೊಂಡರೂ, ಕಾಂಗ್ರೆಸ್, ಎಐಎಂಐಎಂ ಮತ್ತು ಇತರ ವಿರೋಧ ಪಕ್ಷಗಳು ಇದನ್ನು ‘ಸಂವಿಧಾನ ವಿರೋಧಿ’ ಮತ್ತು “ಪ್ರಜಾಪ್ರಭುತ್ವ ವಿರೋಧಿ” ಎಂದು ಟೀಕಿಸಿವೆ. ಕಾಯ್ದೆಯ ಅಂಗೀಕಾರದ ನಂತರ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಕೇಂದ್ರ ಸರ್ಕಾರಈ ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದು, ಇದು ಮುಸ್ಲಿಂ ಸಮುದಾಯದ ಮಹಿಳೆಯರು, ವಿಧವೆಯರು ಮತ್ತು ಹಿಂದುಳಿದ ವರ್ಗಗಳಿಗೆ ಪ್ರಯೋಜನ ತರುತ್ತದೆ ಎಂದು ಹೇಳಿದೆ.
ಈಗ ಕಾಯ್ದೆ ಜಾರಿಗೆ ಬಂದಿದ್ದರೂ, ಅದರ ಸಂಪೂರ್ಣ ಅನುಷ್ಠಾನಕ್ಕೆ ವಿವರವಾದ ನಿಯಮಗಳನ್ನು ಸರ್ಕಾರವು ರೂಪಿಸಬೇಕಾಗಿದೆ. ಈ ನಿಯಮಗಳು ಜನರ ಪ್ರತಿಕ್ರಿಯೆಗೆ ತೆರೆದಿರುತ್ತವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏತನ್ಮಧ್ಯೆ, ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಕಾನೂನು ಸವಾಲುಗಳು ಈ ಕಾಯ್ದೆಯ ಭವಿಷ್ಯವನ್ನು ಗಮನಾರ್ಹವಾಗಿ ಪರಿಣಾಮ ಬೀರುವ ಸಾಧ್ಯತೆ ಎಂದು ತಿಳಿದು ಬಂದಿದೆ.