ಬೆಂಗಳೂರು: ಬೆಂಗಳೂರಿನಲ್ಲಿ ಕಡಿಮೆ ಸಂಬಳಕ್ಕೆ ದುಡಿದ್ದಿದ್ದು ಸಾಕು. ಊರಿಗೆ ಹೋಗಿ ಒಂದು ಬಿಸಿನೆಸ್ ಶುರು ಮಾಡಬೇಕು. ಹುಟ್ಟಿದ ಊರಿನಲ್ಲೇ ದುಡಿದು ನೆಮ್ಮದಿಯಿಂದ ಇರಬೇಕು ಎಂಬುದು ತುಂಬ ಜನರ ಕನಸಾಗಿರುತ್ತದೆ. ಆದರೆ, ಅದಕ್ಕೆ ಬಂಡವಾಳದ ಕೊರತೆ ಇರುತ್ತದೆ. ಆದರೆ, ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸ್ಥಾಪನೆಗೆಂದೇ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು (PM Mudra Scheme) ಜಾರಿಗೊಳಿಸಿದೆ. ಇದರ ಅನ್ವಯ ಬಿಸಿನೆಸ್ ಮಾಡಲು ಇಚ್ಛಿಸುವವರು 20 ಲಕ್ಷ ರೂ.ವರೆಗೆ ಸಾಲ ಪಡೆಯಬಹುದಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದರೂ ಸಾಲ ಲಭ್ಯವಾಗುತ್ತದೆ. ಇದರ ಕುರಿತು ಹೆಚ್ಚಿನ ವಿವರ ಇಲ್ಲಿದೆ.
4 ವಿಭಾಗಗಳಲ್ಲಿ ಸಾಲ ನೀಡಿಕೆ
ಶಿಶು- 50 ಸಾವಿರ ರೂ.
ಕಿಶೋರ್- 50 ಸಾವಿರ ರೂಪಾಯಿ- 5 ಲಕ್ಷ ರೂ.
ತರುಣ್- 5-10 ಲಕ್ಷ ರೂ.
ತರುಣ್ ಪ್ಲಸ್- 10-20 ಲಕ್ಷ ರೂ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
- ಉದ್ಯಮ ಮಿತ್ರ ಪೋರ್ಟಲ್ ಗೆ www.udyamimitra.in ಭೇಟಿ ನೀಡಬೇಕು
- ಹೊಸ ಯೂಸರ್ ಆಗಿದ್ದರೆ ರಿಜಿಸ್ಟರ್ ಮಾಡಿಕೊಳ್ಳಬೇಕು
- ಯಾವ ಕೆಟಗರಿ ಅಡಿಯಲ್ಲಿ (ಶಿಶು, ಕಿಶೋರ್, ತರುಣ್, ತರುಣ್ ಪ್ಲಸ್) ಸಾಲ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು
- ಅರ್ಜಿಯನ್ನು ಭರ್ತಿ ಮಾಡಬೇಕು
- ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು
- ಬಳಿಕ ಅರ್ಜಿಯನ್ನು ಸಬ್ ಮಿಟ್ ಮಾಡಬೇಕು
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ನೀವು ನೀಡಿದ ಎಲ್ಲ ದಾಖಲೆ, ಉದ್ಯಮದ ಮಾಹಿತಿಯನ್ನು ಪರಿಶೀಲನೆ ನಡೆಸಿ ಸಾಲವನ್ನು ಮಂಜೂರು ಮಾಡಲಾಗುತ್ತದೆ. ಇನ್ನು ಆಫ್ ಲೈನ್ ಮೂಲಕ ಸಾಲ ಪಡೆಯುವವರು, ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆಗೆ ತೆರಳಿ, ಮುದ್ರಾ ಸಾಲದ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಸಾಲ ಮಂಜೂರಾದ ಬಳಿಕವೇ ಬಡ್ಡಿದರದ ಮಾಹಿತಿ ನೀಡಲಾಗುತ್ತದೆ.
ಏನೆಲ್ಲ ದಾಖಲೆ ಬೇಕು?
ಗುರುತಿನ ಚೀಟಿ (ಆಧಾರ್, ಪ್ಯಾನ್, ಡಿಎಲ್ ಇತ್ಯಾದಿ), ವಸತಿ ಪ್ರಮಾಣಪತ್ರ, ಬಿಸಿನೆಸ್ ಐಡಿ, ವಿಳಾಸದ ದಾಖಲೆ, ನೋಂದಣಿ ಪ್ರಮಾಣಪತ್ರ, ಬಿಸಿನೆಸ್ ಹೆಸರು, ಬಿಸಿನೆಸ್ ಮಾದರಿ, ಬಿಸಿನೆಸ್ ಚಟುವಟಿಕೆ ದಾಖಲೆ, ಪಾಸ್ ಪೋರ್ಟ್ ಸೈಜ್ ಫೋಟೋ, ಪ್ಯಾನ್ ಕಾರ್ಡ್, ಆರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್, ಜಿಎಸ್ ಟಿಎನ್ ಸಂಖ್ಯೆ ಸೇರಿ ಹಲವು ದಾಖಲೆಗಳನ್ನು ಒದಗಿಸಬೇಕು.