ಬೆಂಗಳೂರು: ವಾಮನ ಚಿತ್ರ ಪ್ರೀಮಿಯರ್ ಶೋ ವೀಕ್ಷಿಸಲು ಇತ್ತೀಚೆಗೆ ನಟ ದರ್ಶನ್ ಆಗಮಿಸಿದ್ದರು. ಈ ವೇಳೆ ಲಕ್ಷ ಲಕ್ಷ ಭದ್ರತಾ ಶುಲ್ಕವನ್ನು ವಾಮನ ಚಿತ್ರ ತಂಡ ಕಟ್ಟಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ತೆಲಂಗಾಣದಲ್ಲಿ ಪುಷ್ಪ 2 ರಿಲೀಸ್ ವೇಳೆ ಕಾಲ್ತುಳಿತ ನಡೆದಿತ್ತು. ಆ ವೇಳೆ ಮಹಿಳೆಯೋರ್ವರು ಸಾವನ್ನಪ್ಪಿ, ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಹೀಗಾಗಿ ಕರ್ನಾಟಕ ಪೊಲೀಸರು ಅಲರ್ಟ್ ಆಗಿದ್ದಾರೆ. ಸ್ಟಾರ್ ನಟರು ಸಿನಿಮಾ ವೀಕ್ಷಣೆಗೆ ಬಂದಾಗ ಪೊಲೀಸ್ ಸೆಕ್ಯೂರಿಟಿ ಕಡ್ಡಾಯ ಎಂದು ಸೂಚಿಸಿದ್ದಾರೆ.
ಪೊಲೀಸ್ ಸೆಕ್ಯೂರಿಟಿ ಪಡೆಯಬೇಕು ಅಂದ್ರೆ, ಸಿನಿ ತಂಡ ಲಕ್ಷ ಲಕ್ಷ ಹಣ ಕಟ್ಟಬೇಕು. ಈ ಹಿನ್ನೆಲೆಯಲ್ಲಿ ಧನ್ವೀರ್ ಅಭಿನಯದ ವಾಮನ ಚಿತ್ರ ವೀಕ್ಷಣೆಗೆ ದರ್ಶನ್ ಬಂದ ವೇಳೆ ಪೊಲೀಸ್ ಭದ್ರತೆಗೆ ಪೊಲೀಸರು ಲಕ್ಷ ಲಕ್ಷ ಹಣ ಕಟ್ಟಿಸಿಕೊಂಡಿದ್ದಾರೆ ಎನ್ನಲಾಗಿದೆ.
ಏಪ್ರಿಲ್ 9 ರಂದು ವಾಮನ ಚಿತ್ರದ ಪ್ರೀಮಿಯರ್ ಶೋ ಜಿಟಿ ಮಾಲ್ ನಲ್ಲಿ ಆಯೋಜನೆಗೊಂಡಿತ್ತು. ಆಗ ವಾಮನ ಚಿತ್ರವನ್ನು ದರ್ಶನ್ ವೀಕ್ಷಿಸಿದ್ದರು. ಧನ್ವೀರ್ ಹಾಗೂ ಚಿಕ್ಕಣ್ಣ ಕೂಡ ಈ ವೇಳೆ ಜೊತೆಯಾಗಿದ್ದರು. ಭದ್ರತೆಗಾಗಿ ಕೆಪಿ ಅಗ್ರಹಾರ ಪೊಲೀಸರಿಗೆ ಮನವಿ ಮಾಡಲಾಗಿತ್ತು.
ಚಿತ್ರ ತಂಡವು ನಮ್ಮ ಬಾಡಿ ಗಾರ್ಡ್ಸ್ ಇರುತ್ತಾರೆ. ಹೀಗಾಗಿ ಕೇವಲ ನಾಲ್ಕೈದು ಮಂದಿ ಪೊಲೀಸರ ಭದ್ರತೆ ಕೊಡಿ ಎಂದು ಮನವಿ ಮಾಡಿತ್ತಂತೆ. ಯಾರೆಲ್ಲ ಚಿತ್ರ ವೀಕ್ಷಣೆಗೆ ಬರ್ತಾರೆ ಅಂತ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಆಗ ದರ್ಶನ್ ಬರುವ ವಿಚಾರ ಪೊಲೀಸರಿಗೆ ಗೊತ್ತಾಗಿದೆ. ಆಗ ದರ್ಶನ್ ಬರುವುದರಿಂದಾಗಿ ಫ್ಯಾನ್ಸ್ ಹೆಚ್ಚಾಗಿ ಬರುತ್ತಾರೆ. ಅಹಿತಕರ ಘಟನೆ ನಡೆದರೆ ಯಾರು ಹೊಣೆ? ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಹೀಗಾಗಿ ಶುಲ್ಕ ಕಟ್ಟಿ ಹೆಚ್ಚುವರಿ ಬಂದೋ ಬಸ್ತ್ ಮಾಡಿಕೊಳ್ಳಿ ಎಂದು ಸೂಚನೆ ನೀಡಿದ್ದರು. ಸುಮಾರು 40 ಜನ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಇದಕ್ಕಾಗಿ ಚಿತ್ರತಂಡ ಬರೋಬ್ಬರಿ 3.04 ಲಕ್ಷ ರೂ. ಭದ್ರತಾ ಶುಲ್ಕ ಕಟ್ಟಿತ್ತು ಎನ್ನಲಾಗಿದೆ.