ಬೈಂದೂರು : ಜೆಪಿ ಜೋಲಾಲ್ ಸ್ಮಾರಕ ಅಕಾಡೆಮಿ ಆಫ್ ಮಾರ್ಷಿಯಲ್ ಆರ್ಟ್ಸ್, ಜಪಾನ್ ಕೆಂಪುಕೈ ಕರಾಟೆ ಇಂಟರ್ ನ್ಯಾಷನಲ್ ಅಫಿಲಿಯೇಟ್ ಯೂನಿವರ್ಸಲ್ ಕರಾಟೆ ಯೂನಿಯನ್ ಬೈಂದೂರು ಘಟಕದ ಉದ್ಘಾಟನೆ ಮತ್ತು ಕರಾಟೆ ಪ್ರದರ್ಶನ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕರಾಟೆ ಪಟು,14 ನೇ ವಯಸ್ಸಿನಲ್ಲಿಯೇ ಶಿಕ್ಷಣದ ಜೊತೆ ಜೊತೆಗೆ ಕರಾಟೆಯಲ್ಲಿ “Black Belt” ಪಡೆದು ಅನೇಕ ಪ್ರಶಸ್ತಿಗಳನ್ನು ಪಡೆದು ಸಾಕಷ್ಟು ಹೆಸರು ಮಾಡಿರುವ ಸುಬ್ರಹ್ಮಣ್ಯ ಪೂಜಾರಿ ಯಡ್ತರೆ, ರೀತನನ್, ಸಜೀವನ್, ಸಜೀ ಕಾರೆಕ್ಕನ್ ನೇತೃತ್ವದಲ್ಲಿ ಕರಾಟೆ ತರಗತಿ ಮತ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.

ಕೊಲ್ಲೂರು ದೇವಳದ ತಂತ್ರಿಗಳಾದ ಡಾ. ಕೆ. ರಾಮಚಂದ್ರ ಅಡಿಗ ಈ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕರಾಟೆ ಕಲೆ ಆತ್ಮ ರಕ್ಷಣೆಗಿದ್ದು, ಇದನ್ನು ದುರುಪಯೋಗ ಮಾಡಿಕೊಳ್ಳಬಾರದು. ಕರಾಟೆ ತರಬೇತಿ ಪಡೆಯುವುದರಿಂದ ಆತ್ಮ ಬಲ ಮತ್ತು ಮಾನಸಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ. ಇದರಿಂದಾಗಿ ದೇಹಾರೋಗ್ಯ ಸಿಗುತ್ತದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕರಾಟೆ ದಾರಿದೀಪವಾಗುತ್ತದೆ. ಕಠಿಣ ತರಬೇತಿಯ ಮೂಲಕ, ವಿದ್ಯಾರ್ಥಿಗಳು ದೈಹಿಕ ಶಕ್ತಿ, ಚುರುಕುತನ ಮತ್ತು ಮಾನಸಿಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ತರಗತಿಯು ಏಕತೆ, ಗೌರವ ಮತ್ತು ಬೆಂಬಲಿತ ವಾತಾವರಣವನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.

30 ವರ್ಷಗಳ ಕಾಲ ಸತತ ಕರಾಟೆಯಲ್ಲಿ ಗುರುತಿಸಿಕೊಂಡಿರುವ ರೀತನನ್, ಸಜೀವನ್, ಸಜೀ ಕಾರೆಕ್ಕನ್ ಅವರನ್ನು ಸನ್ಮಾನಿಸಲಾಯಿತು. ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಬೈಂದೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ತಿಮ್ಮೇಶ್ ಬಿ.ಎನ್, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಬೈಂದೂರು ಬಿಜೆಪಿ ಮಂಡಲಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ ಉಪ್ಪುಂದ, ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರಕರ್, ಬೆಂಗಳೂರು ಆರ್.ಟಿ.ಐ. ಕಾರ್ಯಕರ್ತ ರಾಜು ಸೇರಿದಂತೆ ಹಲವರು ಇದ್ದರು.
ಕೆಂಪುಕೈ ಕರಾಟೆ ಇಂಟರ್ನ್ಯಾಷನಲ್ ಅಫಿಲಿಯೇಟ್ ಯೂನಿವರ್ಸಲ್ ಕರಾಟೆ ಯೂನಿಯನ್ ಜಪಾನ್ ನ ಬೈಂದೂರು ಘಟಕ ಸಂಚಾಲಕ ಸುಬ್ರಹ್ಮಣ್ಯ ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಪೂಜಾರಿ ಯೋಜನಾನಗರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಹೆಸರಾಂತ ಕರಾಟೆ ಪಟುಗಳಾದ ರೀತನನ್, ಸಜೀವನ್, ಸಜೀ ಕಾರೆಕ್ಕನ್ ಹಾಗೂ ಕರಾಟೆ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ ನಡೆಯಿತು.