ಬೆಂಗಳೂರಿನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಬೆಂಗಳೂರು ಸ್ಮಾರ್ಟ್ ಇನ್ಪಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದ್ದು, ಇದಕ್ಕೆ ಬಿಬಿಎಂಪಿ ಅಗತ್ಯ 14 ಜನ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿ ಆದೇಶಿಸಿದೆ.
ಬೆಂಗಳೂರು ಸ್ಮಾರ್ಟ್ ಇನ್ಪಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆಗೆ ಪೂರ್ಣಾವಧಿಯ ನಿರ್ದೇಶಕರ ಅವಶ್ಯಕತೆ ಇರುವುದರಿಂದ ಬಿಬಿಎಂಪಿಯಲ್ಲಿ ಪ್ರಧಾನ ಅಭಿಯಂತರರ ಹುದ್ದೆಯನ್ನು ಬಿ-ಸ್ಮೈಲ್ ಸಂಸ್ಥೆಯ ನಿರ್ದೇಶಕರ ಹುದ್ದೆಗೆ ವಿಲೀನಗೊಳಿಸಲಾಗಿದ್ದು, ಈಗಾಗಲೇ ಪ್ರಹ್ಲಾದ್ ಅವರನ್ನು ಈ ಹುದ್ದೆಗೆ ನಿಯೋಜನೆ ಮಾಡಲಾಗಿದೆ.
ಬಿ-ಸ್ಮೈಲ್ ಸಂಸ್ಥೆಗೆ ಇಂಜಿನಿಯರ್ ಗಳು ಹಾಗೂ ಇತರೆ ಸಿಬ್ಬಂದಿಯ ಅಗತ್ಯವನ್ನು ಮನಗಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿವಿಧ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಭಿಯಂತರರು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಆದೇಶಿಸಲಾಗಿದೆ.
ಮಾಲತಿ ಆರ್. ಅವರನ್ನು ಅಧೀಕ್ಷಕರ ಅಭಿಯಂತರಾಗಿ, ಸವಿತಾ ಪದಮತಿ, ಅಮೃತಸಾಯಿ, ಗೀತಾ ಅವರನ್ನು ಕಾರ್ಯಪಾಲಕ ಅಭಿಯಂತರರಾಗಿ, ಪ್ರಕಾಶ್ ಕೆ.ವಿ., ಪ್ರಿಯದರ್ಶಿನಿ, ಯತೀಶ್ ಎ.ಜೆ., ದೇವರಾಜು ವೈ ಅವರನ್ನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿ, ನವೀನ್ ಜಿ., ದೀಪ್ತಿಪ್ರಿಯಾ ಅವರುಗಳನ್ನು ಸಹಾಯಕ ಅಭಿಯಂತರರಾಗಿ, ಪಿ.ಎನ್. ಮೂರ್ತಿ ಅವರನ್ನು ಕಿರಿಯ ಅಭಿಯಂತರರಾಗಿ, ಅವಿನಾಶ್ ಎಸ್. ಪುಠಾಣಿ ಅವರನ್ನು ವ್ಯವಸ್ಥಾಪಕರನ್ನಾಗಿ, ವಿನೋದ್ ಕುಮಾರ್ ಹಾಗೂ ನಾಗೇಂದ್ರ ಡಿ.ಎಸ್. ಅವರನ್ನು ದ್ವಿತೀಯ ದರ್ಜೆ ಸಹಾಯಕರಾಗಿ ನಿಯೋಜನೆ ಮಾಡಿ ಆದೇಶಿಸಲಾಗಿದೆ.