ಬೆಂಗಳೂರು: ಕೆ.ಆರ್.ಎಸ್ ಡ್ಯಾಂ ಕಟ್ಟಿದ್ದು ಟಿಪ್ಪು ಎಂದು ನಾನು ಹೇಳಿಲ್ಲ ಹಾಗೆ ಹೇಳೋದಕ್ಕೂ ಆಗುವುದಿಲ್ಲ ಎಂದು ಸಚಿವ ಎಚ್ ಸಿ ಮಹದೇವಪ್ಪ ಟಿಪ್ಪು ಕುರಿತು ಅವರು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವರದಿಗಾರರಿಗೆ ಪ್ರತಿಕ್ರಿಯಿಸಿರುವ ಸಚಿವರು, 1911ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೆ ಆರ್ ಎಸ್ ಡ್ಯಾಂ ಕಟ್ಟಲು ಪ್ರಾರಂಭಿಸಿದಾಗ 1794ರಲ್ಲಿ ಟಿಪ್ಪು ಬರೆದ ಪರ್ಷಿಯನ್ ಭಾಷೆಯಲ್ಲಿ ಇರುವ ಶಿಲಾ ಶಾಸನ ಸಿಕ್ಕಿದೆ. ಅದರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಬೇಕು ಎಂಬ ಪ್ರಸ್ತಾಪ ಇದೆ. ಅದನ್ನೂ ಕೂಡ ಕೆಆರ್ ಎಸ್ ನಲ್ಲಿಯೇ ಇಡಲಾಗಿದೆ ಎಂದು ಮಹದೇವಪ್ಪ ತಿಳಿಸಿದರು.
ನಾನು ಎಲ್ಲಿಯೂ ಕೂಡ ಟಿಪ್ಪು ಡ್ಯಾಂ ಕಟ್ಟಿದ್ದೆಂದು ಹೇಳಿಯೇ ಇಲ್ಲ. ಆದರೆ, ಟಿಪ್ಪುಗೂ ಕೂಡ ಅದೇ ತರಹದ ಕನಸು ಇತ್ತು ಎಂಬುದನ್ನು ಹೇಳಿದ್ದು, ಇದರ ನೈಜತೆಯ ಬಗ್ಗೆ ಇತಿಹಾಸಕಾರರು ಸ್ಪಷ್ಟಪಡಿಸಬೇಕೆಂದು ಅವರು ಹೇಳಿದ್ದಾರೆ.
ಕೆ ಆರ್ ಎಸ್ ಡ್ಯಾಂ ಕಟ್ಟಿದ್ದು ನಮ್ಮ ಇಂಜಿನಿಯರ್ ಗಳು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಡ್ಯಾಂ ನ ನೀಲಿನಕ್ಷೆ ಹಾಕಿ ಎಷ್ಟು ಜಮೀನು ಬೇಕು ಎಂದು ತೀರ್ಮಾನಿಸಿ ಕಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ನಾನು KRS ಡ್ಯಾಂ ಬಳಿ ಇಟ್ಟಿರುವ ಶಿಲಾ ಶಾಸನದ ಬಗ್ಗೆ ಮಾತ್ರ ಹೇಳಿದ್ದೇನೆ. ಬಿಜೆಪಿಯವರು ಏನು ಬೇಕಾದರೂ ಟೀಕೆ ಮಾಡಿಕೊಳ್ಳಲಿ, ನಾನು ಅನಗತ್ಯ ಗೊಂದಲ ಇರಬಾರದು ಎನ್ನುವ ಕಾರಣಕ್ಕೆ ಹೇಳಿದ್ದೇನೆ. ಯಾರನ್ನೋ ಓಲೈಸಲು, ಸಮಾಧಾನಪಡಿಸಲು ಹೇಳಿಲ್ಲ ಎಂದು ತಿಳಿಸಿದ್ದಾರೆ.