ಕಲಬುರಗಿ: ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲೆಯ ಹೊರವಲಯದ ಪಟ್ಟಣ ಗ್ರಾಮದ ಬಳಿಯ ಡ್ರೈವರ್ ಡಾಬಾದಲ್ಲಿ ತ್ರಿಬಲ್ ಮರ್ಡರ್ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಟ್ಟಣ ಗ್ರಾಮದ ನಾಗರಾಜ ತಾಳಿಕೋಟಿ (23), ಈರಣ್ಣ ತಾಳಿಕೋಟಿ(27), ಭೀರಣ್ಯ ಪೂಜಾರಿ (21), ಸಿದ್ದಾರೂಢ ಹತಗುಂದಿ (22), ನಾಗರಾಜ ಬಿಸಗೊಂಡ(17), ತಂಬಾಕವಾಡಿ ಗ್ರಾಮದ ಪೀರೇಶ ಹಡಪದ(35), ಪಟ್ಟಣ ಗ್ರಾಮದ ಸಾಗರ ಪಾಟೀಲ (24), ರಾಚಣ್ಯ ಮಾಲಿ ಪಾಟೀಲ(22), ಚಂದ್ರಕಾಂತ ಪೂಜಾರಿ(30), ಭಾಗ್ಯಶ್ರೀ ತಾಳಿಕೋಟಿ (30) ಬಂಧಿತ ಆರೋಪಿಗಳು.
ರೌಡಿ ಶೀಟರ್ ಸೋಮನ ಪತ್ನಿಯ ಶಪಥ ಕೊಲೆಗೆ ಕಾರಣ ಎನ್ನಲಾಗಿದೆ. ಗಂಡನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವವರೆಗೂ ಕೊರಳಲ್ಲಿದ್ದ ಮಾಂಗಲ್ಯ ಸೂತ್ರ ತೆಗೆಯುವದಿಲ್ಲ ಎಂದು ಗಂಡನ ಶವದ ಮುಂದೆ ಶಪಥ ಮಾಡಿದ್ದಳು ಎನ್ನಲಾಗಿದೆ. ಸದ್ಯ ಅವಳ ಶಪಥ್ ಕೊಲೆಗೆ ಕಾರಣ ಎಂಬುವುದು ತನಿಖೆಯಿಂದ ಬಯಲಾಗಿದೆ. ಹಿಂದಿನ ವರ್ಷ ನವೆಂಬರ್ 12 ರಂದು ನಡೆದ ರೌಡಿಶೀಟರ್ ಸೋಮ ಎಂಬಾತನ ಕೊಲೆಯಾಗಿತ್ತು. ಸಿದ್ದಾರೂಢ ಹಾಗೂ ಕುಟುಂಬಸ್ಥರು ಸೋಮನನ್ನ ಬರ್ಬರವಾಗಿ ಹತ್ಯೆ ಮಾಡಿದ್ದರು ಎನ್ನಲಾಗಿದೆ.
ಸೋಮನ ಕೊಲೆ ಬಳಿಕ ಆತನ ಪತ್ನಿ ಭಾಗ್ಯಶ್ರೀ, ತನ್ನ ಗಂಡನ ಶವದ ಮುಂದೆ ಒಂದು ಶಪಥ ಮಾಡಿದ್ದಳು ಎನ್ನಲಾಗಿದೆ. ಹೀಗಾಗಿ ಮಾಂಗಲ್ಯ ಸೂತ್ರವನ್ನು ಕೂಡ ತೆಗೆದಿರಲಿಲ್ಲ ಎನ್ನಲಾಗಿದೆ. ಕೊಲೆಯಾಗಿರುವ ಸೋಮನ ಸಹೋದರ ಈರಣ್ಣ , ನಾಗಾರಾಜ್ ಹಾಗೂ ಆತನ ಗ್ಯಾಂಗ್ ಆತನ ಕೊಲೆಯ ಆರೋಪಿಗಳ ಕೊಲೆಗೆ ಸ್ಕೆಚ್ ಹಾಕಿತ್ತು.
ಇನ್ನೊಂದೆಡೆ ಸೋಮನ ಕೊಲೆಯ ಆರೋಪಿಗಳಾಗಿರುವ ಸಿದ್ದಾರೂಢ ತುಗದಿ, ಜಗದೀಶ್, ಅಣ್ಣಪ್ಪ ಬೇಲ್ ಮೇಲೆ ಹೊರ ಬಂದಿದ್ದರು. ಇವರ ಹತ್ಯೆಗಾಗಿ ಸೋಮನ ಸಹೋದರನ ಗ್ಯಾಂಗ್ ಕಾಯುತ್ತಿತ್ತು. ಡಾಬಾದಲ್ಲಿದ್ದ ಸಿದ್ದಾರೂಢ, ಜಗದೀಶ್, ಅಣ್ಣಪ್ಪ ಇರುವ ಮಾಹಿತ ಪಡೆದು, ಸಿದ್ದಾರೂಢ, ಜಗದೀಶ್, ಕೆಲಸಗಾರ ರಾಮುನನ್ನು ಕೊಲೆ ಮಾಡಿದ್ದಾರೆ. ಅಣ್ಣಾರಾಯ ತುಗದಿ ಆರೋಪಿಗಳ ಗುರಿಯಾಗಿದ್ದ. ಆದರೆ, ಕತ್ತಲಲ್ಲಿ ಅಣ್ಣಾರಾಯ ಮತ್ತು ರಾಮಚಂದ್ರರನ್ನ ಹಂತಕರು ಬೆನ್ನಟ್ಟಿದ್ದಾರೆ. ಆಗ ಕತ್ತಲಲ್ಲಿ ರಾಮಚಂದ್ರನನ್ನೇ ಅಣ್ಣಾರಾಯ ಅಂದುಕೊಂಡು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 ಜನ ಆರೋಪಿಗಳನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.