ಬೆಂಗಳೂರು: 400 ಕೆಜಿ ಕೂದಲು ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೋಲದೇವನಹಳ್ಳಿ ಪೊಲೀಸರಿಂದ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಕೂದಲಿಗೆ ಐದಾರು ಸಾವಿರದಷ್ಟು ಬೆಲೆಯಿದೆ. ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರ ಕ್ರಾಸ್ ನಲ್ಲಿರುವ ಗೋದಾಮಿನಲ್ಲಿ ಮಾರ್ಚ್ 1 ರಂದು ಈ ಘಟನೆ ನಡೆದಿದೆ. ಆರೋಪಿ ಯಲ್ಲಪ್ಪ ಸೇರಿದಂತೆ ಐದು ಜನರ ತಂಡದಿಂದ ಈ ಕೃತ್ಯ ಎಸಗಲಾಗಿದೆ.
ಖದೀಮರು, ಗೋದಾಮಿನ ಬೀಗ ಮುರಿದು ಗೂಡ್ಸ್ ವಾಹನದ ಮೂಲಕ ಕೂದಲು ಕದ್ದು ಪರಾರಿಯಾಗಿದ್ದರು. ಸುಮಾರು 25 ಲಕ್ಷ ಬೆಲೆ ಬಾಳುವ 400 ಕೆಜಿ ಕೂದಲನ್ನು ಕದ್ದು ಪರಾರಿಯಾಗಿದ್ದರು. ಮಾರನೇ ದಿನ ಮಾಲೀಕ ವೆಂಕಟರಮಣ ಗೋದಾಮಿಗೆ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಆನಂತರ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಮ ದಾಖಲಿಸಿಕೊಂಡಿರುವ ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಕದ್ದ ಕೂದಲುಗಳನ್ನು ಚನ್ನರಾಯಪಟ್ಟಣ ಹಾಗೂ ಅಂಧ್ರಪ್ರದೇಶಗಳಿಗೆ ಸಾಗಿಸಿರುವುದು ಬೆಳಕಿಗೆ ಬಂದಿದೆ. ಈ ಕೂದಲುಗಳನ್ನು ಚೀನಾ, ಬರ್ಮಾ ಮತ್ತು ಹಾಂಕಾಂಗ್ ಗೆ ರಫ್ತು ಮಾಡಲು ಕೂಡ ಪ್ಲ್ಯಾನ್ ಮಾಡಲಾಗಿತ್ತು ಎನ್ನಲಾಗಿದೆ. ಆದರೆ ಇದೀಗ ಐದು ಜನರ ಪೈಕಿ ಯಲ್ಲಪ್ಪ ಗೊಲ್ಲರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ನಾಲ್ವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.