ಬೆಂಗಳೂರು: ತಿಂಗಳಾಂತ್ಯಕ್ಕೆ ಬಿಜೆಪಿ ರಾಜ್ಯ ಘಟಕಕ್ಕೆ ಗುಡ್ನ್ಯೂಸ್ ಸಿಗುವ ಸಾಧ್ಯತೆ ಇದೆ ಎಂಬುವುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಹೈಕಮಾಂಡ್ ನಾಯಕರು ರಾಜ್ಯ ಬಿಜೆಪಿ ಘಟಕಕ್ಕೆ ಬಿ.ವೈ. ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವ ಸುಳಿವನ್ನು ನೀಡಿದ್ದಾರೆ. ಬಿ.ವೈ.ವಿಜಯೇಂದ್ರರನ್ನೇ ಮತ್ತೆ ರಾಜ್ಯಾಧ್ಯಕ್ಷ ಮಾಡುವ ಸುಳಿವನ್ನು ಹೈಕಮಾಂಡ್ ನಾಯಕರು ನೀಡಿದ್ದು, “ಕರ್ನಾಟಕ ನ್ಯೂಸ್ ಬೀಟ್” ಗೆ ಬಿಜೆಪಿಯ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಈ ತಿಂಗಳಾಂತ್ಯಕ್ಕೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷರ ಆಯ್ಕೆಯಾಗುವ ಸಾಧ್ಯತೆ ಇದ್ದು, ಮನೋಹರ್ ಲಾಲ್ ಕಟ್ಟರ್, ಧರ್ಮೇಂದ್ರ ಪ್ರಧಾನ್ ಹಾಗೂ ಭೂಪೇಂದ್ರ ಯಾದವ್ ಮೂವರಲ್ಲಿ ಒಬ್ಬರನ್ನು ರಾಷ್ಟ್ರೀಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಸಾಧ್ಯತೆ ಇದೆ.
ರಾಷ್ಟ್ರೀಯಾಧ್ಯಕ್ಷರ ಆಯ್ಕೆ ಹೈಕಮಾಂಡ್ ಅಂಗಳದಲ್ಲಿ ಆಗುತ್ತಿದ್ದಂತೆ, ಇಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಯಾಗಲಿದ್ದು, ವಿಜಯೇಂದ್ರರ ಹೆಸರು ಘೋಷಣೆ ಬಹುತೇಕ ನಿಶ್ಚಿತವಾಗಿದೆ ಎಂಬ ಮಾಹಿತಿ “ಕರ್ನಾಟಕ ನ್ಯೂಸ್ ಬೀಟ್” ಗೆ ಬಿಜೆಪಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.
ಬಿ.ವೈ. ವಿಜಯೇಂದ್ರ ಈಗಾಗಲೇ ರಾಜ್ಯಾಧ್ಯಕ್ಷರ ಹುದ್ದೆಯಲ್ಲಿ ಒಂದು ವರ್ಷ ಪೂರ್ಣಗೊಳಿಸಿ, ಎರಡನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಿಎಂ ಸಿದ್ಧರಾಮಯ್ಯರ ವಿರುದ್ಧ ಮುಡಾ ಅಕ್ರಮದಲ್ಲಿ ಪಾದಯಾತ್ರೆ ಮಾಡಿದ್ದಾರೆ. ಮುಡಾ ಅಕ್ರಮದಲ್ಲಿ ಪಾದಯಾತ್ರೆ ಮಾಡಿ ಸಿಎಂ ಸಿದ್ಧರಾಮಯ್ಯರ ಬಳಿಯಿದ್ದ 14 ಖಾಲಿ ನಿವೇಶನ ಹಿಂತಿರುಗಿಸುವಂತೆ ವಿಜೇಯಂದ್ರ ಮಾಡಿದ್ದಾರೆ.
ಈ ಪಾದಯಾತ್ರೆ ಯಶಸ್ಸಿನ ಬಳಿಕ ರಾಜ್ಯ ಸರ್ಕಾರದ ಬೆಲೆ ಏರಿಕೆ ಖಂಡಿಸಿ, ಸದ್ಯ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಕೈಗೊಂಡಿದ್ದಾರೆ. ಇಷ್ಟು ಹೊತ್ತಿಗಾಗಲೇ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಹೈಕಮಾಂಡ್ ನಾಯಕರು ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಇಲ್ಲಿಯವರೆಗೂ ಆಯ್ಕೆ ಮಾಡಲಾಗಿಲ್ಲ. ಈಗ ರಾಷ್ಟ್ರೀಯಾಧ್ಯಕ್ಷರ ಆಯ್ಕೆ ಜೊತೆಗೆ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲು ಹೈಕಮಾಂಡ್ ನಾಯಕರು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.