ಕಲರ್ ಫುಲ್ ಅಗಿ ಮದುವೆ ಆದ್ಮೇಲೆ ನವ ಜೋಡಿ ಹನಿಮೂನ್ ಹೋಗುವುದು ಕಾಮನ್. ಸಂತಸದ ಕ್ಷಣಗಳನ್ನು ಕಳೆಯಲು ಬೆಸ್ಟ್ ಪ್ರವಾಸಿ ತಾಣಗಳತ್ತ ಮುಖ ಮಾಡುವುದು ಸಹಜ. ಹೀಗೆ ಮಧುಚಂದ್ರಕ್ಕೆ ಅಂತಾ ಬಂದ ಜೋಡಿಯೊಂದು ಮೇಘಾಲಯದ ಚಿರಾಪುಂಜಿ ಬಳಿ ನಾಪತ್ತೆ ಆಗಿತ್ತು. ಇದೀಗ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮಧ್ಯಪ್ರದೇಶದ ಇಂದೋರ್ ದಂಪತಿ ಹನಿಮೂನ್ ಗೆ ಬಂದು ಮೇ 23ರಂದು ಏಕಾಏಕಿ ನಾಪತ್ತೆ ಆಗಿದ್ದರು. ನಾಪತ್ತೆ ಆಗುವುದಕ್ಕೂ ಮುನ್ನ ಮೇಘಾಲಯದ ಪೂರ್ವ ಖಾಸಿ ಬೆಟ್ಟ, ಹಸಿರು ತಾಣಗಳಲ್ಲಿ ಸೋನಂ ಮತ್ತು ರಾಜಾ ರಘುವಂಶಿ ಕೈ-ಕೈ ಹಿಡಿದು ಸುತ್ತಾಡಿದ್ದರು. ಆದರೆ, ದಿಢೀರ್ ಕಣ್ಮರೆ ಆಗಿದ್ದರು. ಅಂದಿನಿಂದ ನವ ದಂಪತಿಗಾಗಿ ಹುಡುಕಾಟ ಶುರುವಾಗಿತ್ತು. ಇನ್ನು ರಾಜಾ ರಘುವಂಶಿ ಕುಟುಂಬ ತನಿಖೆಯನ್ನ ಸಿಬಿಐಗೆ ವಹಿಸುವಂತೆ ಒತ್ತಾಯಿಸಿತ್ತು. ತನಿಖೆಗೆ ಇಳಿದ ಪೊಲೀಸರಿಗೆ ಹಲವು ಇಂಟ್ರೆಸ್ಟಿಂಗ್ ವಿಷ್ಯಗಳು ಲಭ್ಯವಾಗಿದ್ದು, ಪತ್ನಿಯೇ ಪತಿಯ ಹೆಣ ಉರುಳಿಸಿರುವುದು ಗೊತ್ತಾಗಿದೆ.
ಪೊಲೀಸರ ತೀವ್ರ ಹುಡುಕಾಟದ ಬಳಿಕ ಜೂನ್ 2 ರಂದು ರಾಜಾ ರಘುವಂಶಿಯ ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಹಳ್ಳವೊಂದ್ರಲ್ಲಿ ಪತ್ತೆ ಅಗಿತ್ತು. ಆದರೆ ರಘುವಂಶಿ ಪತ್ನಿ ಸೋನಂ ಮಾತ್ರ ಪತ್ತೆ ಆಗಿರಲಿಲ್ಲ. ಆಗಲೇ ಸೋನಂ ಮೇಲೆ ಪೊಲೀಸರಿಗೆ ಅನುಮಾನ ಶುರುವಾಗಿತ್ತು. ತನಿಖೆಗೆ ಬೆನ್ನು ಹತ್ತಿದ್ದ ಪೊಲೀಸರು, ಸ್ಥಳೀಯರು ಹಾಗೂ ಪ್ರವಾಸಿ ಗೈಡ್ ಗಳ ವಿಚಾರಣೆ ಮುಂದುವರಿಸಿದ್ದರು. ಈ ವೇಳೆ ನವ ಜೋಡಿ ಜೊತೆ ಮೂವರು ಪುರುಷರು ಇದ್ದಿದ್ದು ತಿಳಿದು ಬಂದಿತ್ತು.

ಆ ಬಳಿಕ ಹಲವು ದೃಷ್ಟಿ ಕೋನದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಪತ್ನಿ ಸೋನಂಳ ರಾಕ್ಷಸಿ ಕೃತ್ಯ ಬಯಲಾಗಿದೆ. ಹನಿಮೂನ್ ಗೆ ಬಂದ ನವ ಜೋಡಿಯನ್ನು ಯಾರೂ ಅಪಹರಿಸಿಲ್ಲ. ಬದಲಿಗೆ ಪತ್ನಿಯೇ ಫ್ರೀ ಪ್ಲಾನ್ ಮಾಡಿ ರಂಘುವಂಶಿ ಕತೆ ಮುಗಿಸಿರುವುದು ಬಯಲಾಗಿದೆ. ಸದ್ಯ ಪೊಲೀಸ್ ವಶದಲ್ಲಿರುವ ಸೋನಂಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಇನ್ನು ಪೊಲೀಸ್ ತನಿಖೆ ವೇಳೆ ಮಧ್ಯಪ್ರದೇಶದಿಂದ ಬಂದಿದ್ದ ನಾಲ್ಕು ಮಂದಿ ಹಂತಕರು ಸೋನಂಗೆ ಸಾಥ್ ಕೊಟ್ಟಿದ್ದು, ರಘುವಂಶಿ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ನಾಲ್ಕು ಮಂದಿ ಪೈಕಿ ಮೂವರನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ರಾಜಾ ರಘುವಂಶಿ ಕೊಲೆಗೆ ಕಾರಣವೇನು ಅನ್ನೋ ಬಗ್ಗೆ ವಿಚಾರಣೆ ಮುಂದುವರೆಸಿದ್ದಾರೆ.