ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕಾಲ ಸನ್ನಿಹಿತವಾಗಿದೆ. ಒಬ್ಬರಿಗೆ ಒಂದೇ ಹುದ್ದೆ ಅನ್ನೋ ಪಾಲಿಸಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹೈಕಮಾಂಡ್ ನಿರ್ಧರಿಸಿದೆ.
ಹೀಗಾಗಿ ಡಿ ಕೆ ಶಿವಕುಮಾರ್ ಬದಲಾವಣೆ ಶತಸಿದ್ಧವಾಗಿದೆ. ಇದರ ನಡುವೆ, ಕೆಪಿಸಿಸಿ ಕುರ್ಚಿ ಅಲಂಕರಿಸಲು ಪಕ್ಷದಲ್ಲಿ ಮೆಗಾ ಫೈಟ್ ಶುರುವಾಗಿದೆ. ಡಿಕೆಶಿ ಬದಲಾದರೆ ನಮಗೆ ಅಧಿಕಾರ ನೀಡಿ ಅಂತಾ ಅತಿರಥರು ಹೈಕಮಾಂಡ್ ಮುಂದೆ ಲಾಬಿ ಆರಂಭಿಸಿದ್ದಾರೆ.
ಅದರಲ್ಲಿ ಪ್ರಮುಖವಾಗಿ ಸತೀಶ್ ಜಾರಕಿಹೊಳಿ, ಈ ಪೈಪೋಟಿಯ ಮುಂಚೂಣಿಯಲ್ಲಿದ್ದಾರೆ. ಪ್ರಬಲ ವಾಲ್ಮೀಕಿ ಸಮುದಾಯದ ಮುಖಂಡರಾಗಿರೋ ಜಾರಕಿಹೊಳಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪ್ರಭಾವಿಯಾಗಿದ್ದಾರೆ. ಹೀಗಾಗಿ ಜಾರಕಿಹೊಳಿ, ಕುರ್ಚಿಗೀಗ ಟವಲ್ ಹಾಕಿ ಕುಳಿತಿದ್ದಾರೆ. ಇತ್ತ ಈ ಬಾರಿ ಕೆಪಿಸಿಸಿ ಗಾದಿ ಲಿಂಗಾಯತರಿಗೆ ನೀಡಬೇಕು ಅನ್ನೋ ದೊಡ್ಡ ಕೂಗಿದೆ. ಈ ಕೋಟಾದಲ್ಲಿ ಹಿರಿಯ ನಾಯಕ ಈಶ್ವರ್ ಖಂಡ್ರೆ, ನಾನೂ ಆಕಾಂಕ್ಷಿ ಅಂತಿದ್ದಾರೆ.
ಅಷ್ಟೇ ಅಲ್ಲದೆ ಈ ಇಬ್ಬರೂ ನಾಯಕರೂ ಸಿದ್ದರಾಮಯ್ಯ ಬಣದ ನಾಯಕರೆನ್ನೋದು ವಿಶೇಷ. ಆದ್ರೆ, ತಮ್ಮಿಂದ ತೆರವಾಗೋ ಕುರ್ಚಿಗೆ ತಮ್ಮ ಬಣದ ನಿಷ್ಠನಿಗೇ ಪಟ್ಟಕಟ್ಟಬೇಕು ಅಂತಾ ಡಿಕೆ ಪಟ್ಟು ಹಿಡಿಯಬಹುದು. ಇದರ ನಡುವೆ ತುಮಕೂರಿನ ನಾಯಕ, ಹಾಲಿ ಸಚಿವ ಕೆ ಎನ್ ರಾಜಣ್ಣ ಕೂಡಾ ಕೆಪಿಸಿಸಿ ಗಾದಿ ಮೇಲೆ ಕಣ್ಣಿಟ್ಟು ಕುಳಿತಿದ್ದಾರೆ. ಹೀಗಾಗಿ ಹೈಕಮಾಂಡ್ ಮುಂದಿನ ನಿರ್ಧಾರ ಏನಾಗಿರುತ್ತೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.