ಬಳ್ಳಾರಿ: ಆಟೋದಲ್ಲಿ ಬಂದು ಕಿರಾಣಿ ಅಂಗಡಿ ಮುಂದಿಟ್ಟಿದ್ದ 10ಕ್ಕೂ ಹೆಚ್ಚು ಉಪ್ಪಿನ ಮೂಟೆಗಳನ್ನು ಖದೀಮರಿಬ್ಬರು ಕಳ್ಳತನ ಮಾಡಿರುವ ಘಟನೆ ಬಳ್ಳಾರಿ ನಗರದ ತಾಳೂರು ರಸ್ತೆ ಬಳಿಯ ಕಿರಾಣಿ ಅಂಗಡಿಯೊಂದರಲ್ಲಿ ಬೆಳಕಿಗೆ ಬಂದಿದೆ.
ಆಟೋದಲ್ಲಿ ಬಂದಿದ್ದ ಇಬ್ಬರು ಖದೀಮರಿಂದ ಕಳ್ಳತನ ನಡೆದಿದೆ. ರಾತ್ರಿ ವೇಳೆ ಆಟೋದಲ್ಲಿ ಬಂದಿದ್ದ ಕಳ್ಳರು ಅಂಗಡಿ ಮುಂದೆ ಆಟೋ ನಿಲ್ಲಿಸಿ, ಅಂಗಡಿ ಮುಂದಿದ್ದ ಉಪ್ಪಿನ ಮೂಟೆಗಳನ್ನ ಹೊತ್ತೊಯ್ದಿದ್ದಾರೆ. ಕಳ್ಳರ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸದ್ಯ ಕಳ್ಳತನ ನಡೆದಿರುವ ಕಿರಾಣಿ ಅಂಗಡಿಯಲ್ಲಿ ಕೂಗಳತೆ ದೂರದಲ್ಲೇ ನಿನ್ನೆ ಎಟಿಎಂ ಕಳ್ಳತನದ ಯತ್ನ ನಡೆದಿತ್ತು. ಅದಾದ ಬಳಿಕ ಮತ್ತೇ ಇದೀಗ ಕಿರಾಣಿ ಅಂಗಡಿಯ ಕಳ್ಳತನ ನಡೆದಿದ್ದು, ತಾಳೂರು ರಸ್ತೆ ಏರಿಯಾದ ನಿವಾಸಿಗಳಲ್ಲಿ ಆತಂಕ ಉಂಟುಮಾಡಿದೆ.ಕಳ್ಳರ ಗ್ಯಾಂಗ್ ಅನ್ನು ಪತ್ತೆ ಹೆಚ್ಚುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.