ಬೈಂದೂರು: ಉಡುಪಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಕುಂದಾಪುರ, ಬೈಂದೂರು ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಎಡ ಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿ ಸೌಪರ್ಣಿಕಾ ನದಿ ಪಾತ್ರದ ಭಾಗದಲ್ಲಿ ನೆರೆ ಉಂಟಾಗಿ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಈ ದೃಶ್ಯ ಈಗ ಡ್ರೋನ್ ನಲ್ಲಿ ಸೆರೆಯಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಬೈಂದೂರಿನಲ್ಲಿ ಎಡೆ ಬಿಡದೆ ಮಳೆ ಸುರಿಯುತ್ತಿದೆ. ಕೊಲ್ಲೂರು ಘಾಟಿ ಪ್ರದೇಶದಲ್ಲೂ ನಿರಂತರ ಮಳೆಯಾಗುತ್ತಿರುವುದರಿಂದ ಸೌಪರ್ಣಿಕಾ ನದಿ ಪಾತ್ರದ ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಪಡುಕೋಣೆ, ಮರವಂತೆ ಭಾಗದಲ್ಲಿ ನೆರೆ ಉಂಟಾಗಿ ನೀರು ಮನೆಗಳಿಗೆ ನುಗ್ಗಿ, ಜನ- ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.
ಕರಾವಳಿ ಭಾಗದಲ್ಲಿ ಮಳೆರಾಯನ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ್ತು ತ್ರಾಸಿ -ಮರವಂತೆ ಬೀಚ್ ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸಮುದ್ರದ ನೀರಿಗೆ ಇಳಿಯದಂತೆ ಸೂಚನಾ ಫಲಕವನ್ನು ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್ ಮತ್ತು ಸಿಬ್ಬಂದಿಗಳು ಅಳವಡಿಸಿದ್ದಾರೆ.
ನಾವುಂದ ಮತ್ತು ನಾಡ ಕುದ್ರುವಿನಲ್ಲಿಯೂ ನೆರೆ ಆವರಿಸಿದ್ದು, ಹಲವಾರು ಮನೆಯವರು ಆತಂಕದಲ್ಲೇ ದಿನಕಳೆಯುವಂತಾಗಿದೆ. ಕುದ್ರುವಿನ ಸುತ್ತಲೂ ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದೆ. ವರ್ಷವಿಡೀ ದೋಣಿಯನ್ನೇ ಆಶ್ರಯಿಸಿರುವ ಇಲ್ಲಿನ ನಿವಾಸಿಗಳು ಈಗ ನೆರೆಯಿಂದಾಗಿ ದೋಣಿಯಲ್ಲೂ ಸಂಚರಿಸಲು ಅಸಾಧ್ಯವಾಗಿದೆ. ಹೀಗಾಗಿ ದಿನಸಿ ವಸ್ತುಗಳಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪ್ರತಿವರ್ಷ ನೆರೆ ಬಂದಾಗ ಮಣ್ಣು ಕೊಚ್ಚಿ ಹೋಗುತ್ತಿದ್ದು, ನದಿ ದಡದಲ್ಲಿ ತಡೆಗೋಡೆಯೂ ಇಲ್ಲದೆ ಇರುವುದರಿಂದ ವರ್ಷದಿಂದ ವರ್ಷಕ್ಕೆ ನದಿ ಕೊರೆತವೂ ಜಾಸ್ತಿಯಾಗುತ್ತಿದೆ. ನೆರೆ ಪೀಡಿತ ಮತ್ತು ಕಡಲ ಕೊರೆತ ಪ್ರದೇಶವನ್ನು ಡ್ರೋನ್ ಮೂಲಕ ವೀಕ್ಷಿಸಲಾಯಿತು. ನೆರೆ ಇದೀಗ ಸ್ವಲ್ಪ ಇಳಿಮುಖ ಕಂಡಿದೆ. ಘಾಟಿ ಪ್ರದೇಶದಲ್ಲಿನ ಜನರು ಕೂಡ ಈಗ ಕೈಯಲ್ಲಿ ಜೀವ ಹಿಡಿದು ಬದುಕು ಸಾಗಿಸುವಂತಾಗಿದೆ.