ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ಗೆ ಹೊಸ ರೂಪ ಇನ್ನೂ ಸಿಕ್ಕಿಲ್ಲ. ಹೀಗಾಗಿ ಬಡ ಜನರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಬಿಬಿಎಂಪಿಯು ಇಂದಿರಾ ಕ್ಯಾಂಟೀನ್ ಗೆ ಹೊಸ ರೂಪ ಕೊಡಲಾಗುವುದು ಎಂದು ಹೇಳಿತ್ತು. ಆದರೆ, ವರ್ಷ ಕಳೆದರೂ ಇನ್ನೂ ಹೊಸ ರೂಪ ಸಿಕ್ಕಿಲ್ಲ.
ಕಳೆದ ವರ್ಷ ಬಿಬಿಎಂಪಿಯು ನಗರದಲ್ಲಿ ಇರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಹೊಸ ಮೆನು ಸಿದ್ಧಪಡಿಸಿ, ಅದರಂತೆ ವಿವಿಧ ಬಗೆಯ ಆಹಾರವನ್ನು ಬಡವರು, ಕಾರ್ಮಿಕರಿಗೆ ನೀಡಲಾಗುತ್ತದೆ ಎಂದು ಹೇಳಿತ್ತು. ಮಧ್ಯಾಹ್ನ ಊಟಕ್ಕೆ ಮುದ್ದೆ, ಬಸಾರು, ಚಪಾತಿ, ಪಲ್ಯ ವಿತರಣೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಅಲ್ಲದೇ, ಬೆಳಿಗ್ಗೆ ಉಪಾಹರಕ್ಕೆ ಕೂಡ ವಿವಿಧ ಬಗೆಯ ತಿಂಡಿ- ತಿನಿಸು ವಿತರಿಸಲಾಗುವುದು ಎಂದು ಕೂಡ ಹೇಳಲಾಗಿತ್ತು. ಖುದ್ದು ಸಿಎಂ ಸಿದ್ದರಾಮಯ್ಯ ಕೂಡ ಮೆನು ಸಿದ್ದ ಮಾಡಿದ್ದರು. ಆದರೆ, ಇಂದಿರಾ ಕ್ಯಾಂಟೀನ್ ಗೆ ಮಾತ್ರ ಇದುವರೆಗೂ ಹೊಸ ಮೆನು ಬಂದಿಲ್ಲ.
ನಗರದಲ್ಲಿ ಕೆಲವು ಇಂದಿರಾ ಕ್ಯಾಂಟೀನ್ ಗಳು ಕಾಟಚಾರಕ್ಕೆ ಕಾರ್ಯ ನಿರ್ವಹಿಸುತ್ತಿವೆ. ಇನ್ನುಳಿದಂತೆ ಕೆಲವು ಕ್ಯಾಂಟೀನ್ ಗಳಿಗೆ ಜನರೇ ಬರುತ್ತಿಲ್ಲ. ಇಂದಿರಾ ಕ್ಯಾಂಟೀನ್ ಬರೀ ಅನ್ನ, ಸಾಂಬಾರ್ ಗೆ ಮಾತ್ರ ಸೀಮಿತವಾಗಿದೆ. ಹಾಗಾದರೆ ಸಿಎಂ ಕನಸಿನ ಕೂಸಿಗೆ ಅಧಿಕಾರಿಗಳು ಕೊಳ್ಳೆ ಇಟ್ಟರಾ? ಅಥವಾ ಸಿಎಂ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ಮೆನು ಬದಲಾಯಿಸಲು ಸರ್ಕಾರದ ಬಳಿ ಹಣ ಇಲ್ವಾ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.