ಬೆಂಗಳೂರು: ಬಿಜೆಪಿ ಅವಧಿಯಲ್ಲಿ ಕೋವಿಡ್ ಹಗರಣದ ಆರೋಪ ಕೇಳಿ ಬಂದಿತ್ತು. ರಾಜ್ಯ ಸರ್ಕಾರ ಈ ಹಗರಣದ ಬೆನ್ನು ಬಿದ್ದಿದ್ದು, ತನಿಖೆ ಕೈಗೊಂಡಿದೆ.
ನಿವೃತ್ತ ನ್ಯಾಯ ಮೂರ್ತಿ ಮೈಕಲ್ ಕುನ್ನಾ ವರದಿ ಅಧಾರಿಸಿ ಐಎಎಸ್ ಸೇರಿದಂತೆ ಕೋವಿಡ್ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಿದ್ದ 101 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಕೊರೊನಾ ಕಾಲದಲ್ಲಿ ಕೋಟ್ಯಾಂತರ ರೂ. ಹಗರಣ ನಡೆದಿದೆ ಎಂದು ಕಾಂಗ್ರೆಸ್ ಸರ್ಕಾರ, ತನಿಖೆಗೆ ಆಯೋಗ ರಚಿಸಿದೆ. ಈಗಾಗಲೇ ತನಿಖೆ ನಡೆಸಿ ಸರ್ಕಾರಕ್ಕೆ ಮೈಕಲ್ ಕುನ್ನಾ ಅವರು ಮಧ್ಯಂತರ ವರದಿ ನೀಡಿದ್ದಾರೆ.
ವರದಿಯಲ್ಲಿ ಕೋವಿಡ್ ನಿರ್ವಹಣೆ ವೇಳೆ ವೆಚ್ಚದ ಬಗ್ಗೆ ಅನುಮಾನ, ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಇದಕ್ಕೆ ಉತ್ತರ ನೀಡುವಂತೆ ಬಿಬಿಎಂಪಿಯ 101 ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ನೋಟೀಸ್ ಗೆ ಉತ್ತರ ನೀಡುವಂತೆ ತಾಕೀತು ಮಾಡಲಾಗಿದೆ.
ಈ ನೋಟಿಸ್ ಗೆ ಈಗಾಗಲೇ 99 ಜನ ಅಧಿಕಾರಿಗಳು ಉತ್ತರ ನೀಡಿದ್ದಾರೆ. ಪ್ರಮುಖವಾಗಿ ಉತ್ತರದಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಕೋವಿಡ್ ಟೈಮ್ ನಲ್ಲಿ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ. ಜನರ ಅರೋಗ್ಯ ದೃಷ್ಟಿಯಿಂದ ಹಾಗೂ ಸಕಾಲದಲ್ಲಿ ಸಮರ್ಪಕವಾಗಿ ಔಷಧಿ ಖರೀದಿ ಸೇರಿದಂತೆ ಜನರ ಜೀವ ರಕ್ಷಣೆಗೆ ಮುಂದಾಗಲಾಗಿತ್ತು.
ಅ ದಿನಗಳಲ್ಲಿ ಟೆಂಡರ್ ಮಾಡಲು ಸಮಯಾವಕಾಶ ಕಡಿಮೆ ಇತ್ತು.
ಇತ್ತ ಟೆಂಡರ್ ಕರೆಯಲು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಯಾರು ಬರುತ್ತಿರಲಿಲ್ಲ. ಅಂದಿನ ಸರ್ಕಾರದ ಹಿರಿಯ ಅಧಿಕಾರಿಗಳು ಮೊದಲು ಜನರ ಜೀವ ಉಳಿಸಲು ಕ್ರಮ ಕೈಗೊಳ್ಳಲು ತಿಳಿಸಿದ್ದರು. ಇನ್ನೂ ಬೆಂಗಳೂರಿನಲ್ಲಿ ಕ್ಷಣ ಕ್ಷಣಕ್ಕೂ ವೈರಸ್ ಹೆಚ್ಚಾಗುತ್ತಿತ್ತು. ಮತ್ತೊಂದು ಕಡೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿತ್ತು. ಇವುಗಳನ್ನು ತಡೆಗಟ್ಟಲು ಸಂಬಂಧಿಸಿದ ಔಷಧಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಖರೀದಿ ಮಾಡಿದ್ದೇವೆ. ಇದಕ್ಕೆ ಸಂಬಂಧಿಸಿದ ಬಿಲ್ ಗಳನ್ನು ಈಗಾಗಲೇ ಸಲ್ಲಿಕೆ ಮಾಡಲಾಗಿದೆ ಎಂದು ಉತ್ತರ ನೀಡಿದ್ದಾರೆ.
ಈ ವಿಷಯವಾಗಿ ಉತ್ತರಗಳನ್ನು ಪರಿಶೀಲನೆ ಮಾಡಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಬಿಬಿಎಂಪಿ ಅರೋಗ್ಯ ಇಲಾಖೆಯ ವಿಶೇಷ ಅಯುಕ್ತ ವಿಕಾಸ್ ಕಿಶೋರ್ ಸುರಲ್ಕರ್ ಹೇಳಿದ್ದಾರೆ.