ಬಪ್ಪನಾಡು ರಥೋತ್ಸವ ಅವಘಡದ ಬಗ್ಗೆ ಜಾರಂದಾಯ ಮತ್ತು ಬಂಟ ದೈವಗಳು ದುರ್ಗಾಪರಮೇಶ್ವರಿ ದೇವಸ್ಥಾನದ ತಂತ್ರಿಗಳ ಎದುರಲ್ಲೇ ಆಕ್ರೋಶ ಭರಿತ ಮಾತುಗಳನ್ನಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬಪ್ಪನಾಡಿನ ಕೊಳಚಿಕಂಬಳ ಜಾರಂದಾಯ ನೇಮೋತ್ಸವದಲ್ಲಿ ಈ ಘಟನೆ ನಡೆದಿದೆ. ಮುಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತಕ್ಕೊಳಪಟ್ಟ ಜಾರಂದಾಯ ದೈವದ ಬಂಡಿ ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ದೇವಳದ ರಥ ಅವಘಡದ ಬಗ್ಗೆ ದೈವಗಳು ನುಡಿದಿವೆ. ದೇವಸ್ಥಾನದ ಬ್ರಹ್ಮಕಲಶೋತ್ಸವದ ಹೊತ್ತಲ್ಲಿ ದೇವಸ್ಥಾನಕ್ಕೆ ಬರಲು ಬಿಡಲಿಲ್ಲ. ಆದರೂ ರಥ ಅವಘಡದಲ್ಲಿ ಒಂದೇ ಒಂದು ಜೀವಕ್ಕೂ ಹಾನಿ ಮಾಡಲು ನಾನು ಅಲ್ಲಿ ಬಿಟ್ಟಿಲ್ಲ. ದೇವಸ್ಥಾನದ ಆಡಳಿತದಲ್ಲಿ ಒಳಗಿನ ಅನೇಕ ವಿಷಯಗಳಿವೆ. ಅದನ್ನು ಸರಿ ಮಾಡಿ. ಮುಂದೆ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆ ಹಾಕಲೇಬೇಕು ಎಂದು ದೈವ ಹೇಳಿವೆ.
ಪ್ರಶ್ನೆ ಚಿಂತನೆ ಮಾಡಿ ಮತ್ತೆ ಬ್ರಹ್ಮಕಲಶ ಆಗಬೇಕು. ಬ್ರಹ್ಮ ರಥವೂ ಆಗಬೇಕು. ದೇವಸ್ಥಾನದ ಅವಘಡಗಳಿಗೆ ಆಡಳಿತ ಮಂಡಳಿ ಸಮಸ್ಯೆಯೇ ಕಾರಣ. ಇದನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಬೇಕು ಅಂತ ದೈವಗಳು ಸೂಚನೆ ನೀಡಿವೆ. ಇನ್ನು ದೈವ ನೇಮದಲ್ಲಿ ದೈವಗಳ ಆಕ್ರೋಶ ಕಂಡು ತಂತ್ರಿಗಳು ಸೇರಿದಂತೆ ಅಲ್ಲಿದ್ದ ಭಕ್ತರಿಗೆ ಆತಂಕವಾಗಿದೆ. ಈ ಹಿಂದೆ ಬಪ್ಪನಾಡು ದುರ್ಗಾಪರಮೇಶ್ವರಿ ದೇವಳದ ರಥೋತ್ಸವದ ನಡೆಯುತ್ತಿದ್ದ ವೇಳೆ ತೇರಿನ ಮೇಲ್ಭಾಗ ಏಕಾಏಕಿ ಕುಸಿದಿತ್ತು. ಈ ವೇಳೆ ಅರ್ಚಕರು ತೇರಿನಲ್ಲೇ ಇದ್ದರೂ ಅದೃಷ್ಟವಶಾತ್ ಪಾರಾಗಿದ್ದರು.