ಜೂನ್ 12…ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಗುಜರಾತಿನ ಅಹಮದಾಬಾದ್ ನಿಂದ ಲಂಡನ್ ಗೆ ಪ್ರಯಾಣ ಬೆಳೆಸಿದ್ದ ಏರಿಂಡಿಯಾ ವಿಮಾನ ಪತನವಾಗಿತ್ತು. ಅಷ್ಟೇ….ವಿಮಾನದಲ್ಲಿದ್ದ 12 ಮಂದಿ ಸಿಬ್ಬಂದಿ ಸಹಿತ 241 ಮಂದಿ ಸಜೀವ ದಹನವಾಗಿದ್ದಾರೆ. ಭಾರತದ ಇತಿಹಾಸದಲ್ಲೇ ಎರಡನೇ ಅತಿದೊಡ್ಡ ವಿಮಾನ ದುರಂತ ಅಂತಲೇ ಕರೆಸಿಕೊಳ್ತಿರೋ ಡ್ರೀಮ್ ಲೈನರ್ ಪತನ ನಿಜಕ್ಕೂ ನೂರಾರು ಕುಟುಂಬಗಳ ಕನಸಿಗೆ ಕೊಳ್ಳಿಯನ್ನಿಟ್ಟಿದೆ.
ಬೆಳಗಾವಿಯಲ್ಲಿ ಓದಿದ ವಿದ್ಯಾರ್ಥಿ ಕುಟುಂಬ ಸರ್ವನಾಶ
ಡಾ ಪ್ರತೀಕ್ ಜೋಶಿ, ಬೆಳಗಾವಿಯ ಕೆಎಲ್ ಇ ವೈದ್ಯಕೀಯ ಕಾಲೇಜಿನ 2005ರ ಪಾಸ್ ಔಟ್ ಬ್ಯಾಚಿನ ವಿದ್ಯಾರ್ಥಿ. ಮೂಲತ ರಾಜಸ್ಥಾನದವರಾದ ಪ್ರತೀಕ್, ತಮ್ಮ ಎಂಬಿಬಿಎಸ್ ಮುಗಿಸಿದ್ದು ಬೆಳಗಾವಿಯಲ್ಲಿ. ಅಸಲಿಗೆ ಪ್ರತೀಕ್ ಕಳೆದ 5 ವರ್ಷಗಳಿಂದ ಲಂಡನ್ ನಲ್ಲಿ ವೈದ್ಯರಾಗಿದ್ರು. ಇತ್ತ ಅವರ ಪತ್ನಿ ಕೂಡಾ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದು ಉದಯಪುರದಲ್ಲಿ ಸೇವೆ ಸಲ್ಲಿಸ್ತಿದ್ರು. ಪ್ರತೀಕ್ ದಂಪತಿಗೆ ಮೂವರು ಪುಟಾಣಿ ಮಕ್ಕಳು.
ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಕನಸು ಕಂಡಿದ್ದ ಪ್ರತೀಕ್ ಮತ್ತು ಕೋಮಿ ವ್ಯಾಸ್, ಲಂಡನ್ ನಲ್ಲೇ ಜೊತೆಯಾಗಿ ನೆಲೆಸೋ ಕನಸು ಕಂಡಿದ್ರು. ಹೀಗಾಗಿಯೇ ಕೋಮಿ ವ್ಯಾಸ್ ಕಳೆದ 2 ದಿನಗಳ ಹಿಂದಷ್ಟೇ ಉದಯಪುರದ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ರು. ಪತಿ, ಮಕ್ಕಳೊಟ್ಟಿಗೆ ಲಂಡನ್ ಗೆ ತೆರಳಿ ಅಲ್ಲೇ ನೆಲಸಿ ಹೊಸ ಬದುಕು ಕಟ್ಟಿಕೊಳ್ಳುವ ಕನಸನ್ನು ಕಂಡಿದ್ರು. ಬಟ್, ಕರಾಳ ವಿಧಿಯಾಟ ಐವರ ಜೀವ ಬಲಿ ಪಡೆದಿದೆ.
ಮೊದಲ ಬಾರಿ ಪತಿ ಭೇಟಿಗೆ ಹೊರಟ ಪತ್ನಿ ದುರ್ಮರಣ
ರಾಜಸ್ಥಾನ ಮೂಲದ ಖುಷ್ಬೂ ರಾಜ್ ಪುರೋಹಿತ್ ಕಳೆದ ಐದು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಇಲ್ಲಿನ ಬಲೋತ್ರಾ ಜಿಲ್ಲೆಯ ಅರಬಾ ದುದಾವತ್ ಗ್ರಾಮದ ಖುಷ್ಬೂ ಜನವರಿಯಲ್ಲಿ ಅಷ್ಟೇ ವಿಪುಲ್ ಸಿಂಗ್ ರನ್ನು ಮದುವೆಯಾಗಿದ್ರು. ವಿಪುಲ್ ವೃತ್ತಿಯಲ್ಲಿ ವೈದ್ಯರಾಗಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ ನಲ್ಲಿದ್ರು. ಮದುವೆ ಬಳಿಕ ತುರ್ತು ವೀಸಾ ಸಿಗದ್ದಕ್ಕೆ ಭಾರತದಲ್ಲೇ ಇದ್ದ ಖುಷ್ಬು ಕಳೆದ 5 ತಿಂಗಳಿಂದ ತಯಾರಿ ಮಾಡಿಕೊಂಡು ನಿನ್ನೆ ಪತಿಯನ್ನು ಕಾಣಲು ಡ್ರೀಮ್ ಲೈನರ್ ಹತ್ತಿದ್ರು. ಆದ್ರೆ, ಅವರ ಆ ದೊಡ್ಡ ಕನಸು ವಿಮಾನ ಹತ್ತಿದ ಕೆಲವೇ ಕ್ಷಣಗಳಲ್ಲಿ ಹೊತ್ತಿ ಉರಿದದ್ದು ದುರಂತವೇ ಸರಿ.
ಇಂದೇ ಕೊನೆಯ ದಿನ ಅಂದವರ ಬದುಕೇ ಕೊನೆ
ಜೇಮಿ ಮೀಕ್ ಮತ್ತು ಗ್ರೀನ್ ಲಾ ಇಬ್ರೂ ಸ್ನೇಹಿತರು. ವೃತ್ತಿಯಲ್ಲಿ ಯೋಗ ತರಬೇತುದಾರರಾಗಿದ್ದ ಸ್ನೇಹಿತರು ಬಹು ವರ್ಷಗಳಿಂದ ಪ್ಲ್ಯಾನ್ ಮಾಡಿ ಭಾರತ ಪ್ರವಾಸ ಕೈಗೊಂಡಿದ್ರು. ನಿನ್ನೆ ವಿಮಾನ ಏರುವ ಮುನ್ನ ಗೆಳಯರು ವಿಮಾನ ನಿಲ್ದಾಣದಲ್ಲಿ ವಿಡಿಯೋ ಮಾಡಿದ್ರು. ಭಾರತ ಭೇಟಿ ಒಂದು ಅವಿಸ್ಮರಣೀಯ ನೆನಪು ಅಂತಾ ವರ್ಣಿಸಿದ್ರು. ಇವತ್ತು ಭಾರತದಲ್ಲಿ ನಮ್ಮ ಕಡೆಯ ದಿನ ಅಂತಾ ಭಾವುಕರಾಗಿದ್ರು. ಇಂಥಾ ಗೆಳೆಯರು ಇದೇ ಭಾರತ ಭೂಮಿಯಲ್ಲಿ ಪ್ರಾಣತೆತ್ತಿದ್ದು ವಿಪರ್ಯಾಸ.
ಅಜ್ಜಿ ನೋಡಲು ಬಂದ ಮೊಮ್ಮಕ್ಕಳ ಬಾಳಲ್ಲಿ ವಿಧಿಯಾಟ
ಇನ್ನು ದೂರದ ಲಂಡನ್ ನಿಂದ ತಮ್ಮ ಅಜ್ಜಿಯನ್ನು ಕಾಣಲು ಬಂದ ಸಹೋದರಿಯರೂ ಪ್ರಾಣತೆತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ವೃತ್ತಿ ಬದುಕಿಗೆ ಪದಾರ್ಪಣೆ ಮಾಡಿದ್ದ ಇಬ್ಬರು ಯುವ ಗಗನಸಖಿಯರೂ ದುರಂತದಲ್ಲಿ ಪ್ರಾಣತೆತ್ತಿದ್ದಾರೆ. ಮಣಿಪುರದ ಗಂಗ್ಟೋಯ್ ಶರ್ಮಾ ಮತ್ತು ಲುಮ್ನುಂತೆಂಗ್ ಇಬ್ಬರೂ ನಿನ್ನೆಯ ವಿಮಾನದಲ್ಲಿ ಗಗನ ಸಖಿಯರಾಗಿದ್ರು.
ಇನ್ನು ಕರ್ನಾಟಕದ ಮಂಗಳೂರು ಮೂಲದ ಪೈಲೆಟ್ ಕ್ಲೈವ್ ಕುಂದರ್ ಕೂಡಾ ಅಹಮದಾಬಾದ್ ವಿಮಾನ ಪತನದಲ್ಲಿ ಪ್ರಾಣತೆತ್ತಿದ್ದಾರೆ. ಗುರುವಾರದ ಘನಘೋರ ಘಟನೆಯೊಂದು ಇಂಥಾ ನೂರಾರು ಕುಟುಂಬಗಳ ಕನಸಿಗೆ ಕೊಳ್ಳಿ ಇಟ್ಟಿದೆ.