ಬೆಂಗಳೂರು: ಸಂಜು ವೆಡ್ಸ್ ಗೀತಾ-2 ಚಿತ್ರ ತಂಡವು ಪ್ರಚಾರಕ್ಕೆ ಬರುತ್ತಿಲ್ಲವೆಂದು ನಟಿ ರಚಿತಾ ರಾಮ್ ವಿರುದ್ಧ ಗಂಭೀರ ಆರೋಪ ಮಾಡಿತ್ತು. ಈ ಕುರಿತು ಫಿಲ್ಮ್ ಚೇಂಬರ್ ಗೆ ಕೂಡ ದೂರು ಸಲ್ಲಿಸಲಾಗಿತ್ತು. ಈ ಆರೋಪಕ್ಕೆ ಈಗ ಡಿಂಪಲ್ ಕ್ವೀನ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ರಚಿತಾ ರಾಮ್, ನಿರ್ದೇಶಕ ರಾಜಶೇಖರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಿರ್ದೇಶಕ ನಾಗಶೇಖರ್ ನಮ್ಮ ವಿರುದ್ಧ ಮಾಡುತ್ತಿರುವ ಆರೋಗಳು ಸುಳ್ಳು. ಜ. 17 ರಂದು ಸಂಜು ವೆಡ್ಸ್ ಗೀತಾ 2 ಮೊದಲ ಬಾರಿ ಬಿಡುಗಡೆಯಾಗಿತ್ತು. ಮೊದಲ ಬಾರಿ ಸಿನಿಮಾ ಬಿಡುಗಡೆಯಾದಾಗ ನಾನು ಪ್ರಚಾರಕ್ಕೆ ಹೋಗಿದ್ದೆ. ಆಗ ತಂಡ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ, ನನ್ನ ಅನುಪಸ್ಥಿತಿಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ. ಅದು ಯಾಕೆ ಅಂತಾ ಗೊತ್ತಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈಗ ನಾನು ಬೇರೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಅವರಿಗೆ ಡೇಟ್ ನೀಡಿದ್ದೇನೆ. ಈ ಸಂದರ್ಭದಲ್ಲಿ ಎರಡನೇ ಬಾರಿ ಸಿನಿಮಾ ರಿಲೀಸ್ ಆಗುತ್ತಿದ್ದು, ಪ್ರಚಾರಕ್ಕೆ ಬರಬೇಕು ಎಂದು ಹೇಳಿದರೆ ಹೇಗೆ? ಇದೇ ಸಂಜು ವೆಡ್ಸ್ ಗೀತಾ ತಂಡ ಶೂಟಿಂಗ್ ಕಾರಣವೊಡ್ಡಿ ಬೇರೊಂದು ಸಿನಿಮಾ ಪ್ರಚಾರಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆ ಸಿನಿಮಾವನ್ನು ಮಹಿಳಾ ನಿರ್ಮಾಪಕಿ ನಿರ್ಮಾಣ ಮಾಡಿದ್ದರು. ಅವರು ದುಡ್ಡು ಹಾಕಿರಲಿಲ್ಲವಾ? ಅವಾಗ ಆ ನಿರ್ಮಾಪಕರಿಗೆ ಕಷ್ಟ ಆಗಿಲ್ವಾ? ಎಂದು ಆರೋಪಿಸಿದ್ದಾರೆ.
ಪ್ರಚಾರಕ್ಕೆ ಹೋಗದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಪೋಸ್ಟ್, ಸ್ಟೋರಿ ಹಾಕಿದ್ದೇನೆ. ಈ ಹಿಂದೆ ಪ್ರಚಾರದ ಸಮಯದಲ್ಲಿ ಸರಿಯಾದ ಪ್ಲ್ಯಾನಿಂಗ್ ಮಾಡಿರಲಿಲ್ಲ. ಒಂದೊಂದು ದಿನ ಒಂದೊಂದು ಶೆಡ್ಯೂಲ್ ಹೇಳುತ್ತಿದ್ದರು. ನಂತರ ಕಾರ್ಯಕ್ರಮ ಎಂದು ಮುಂದೂಡುತ್ತಿದ್ದರು. ಹೀಗಾಗಿ ನನಗೆ ಎರಡನೇ ಬಾರಿ ಪ್ರಚಾರದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಇದೆಲ್ಲಾ ನನ್ನ ಮೇಲೆ ಉದ್ದೇಶಪೂರ್ವಕವಾಗಿಯೇ ಮಾಡಿರುವ ಆರೋಪ ಎಂದು ಗುಡುಗಿದ್ದಾರೆ.
ನಾನು ಸಂಜು ವೆಡ್ಸ್ ಗೀತಾ 2 ಚಿತ್ರತಂಡದ ಜೊತೆ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡದೇ ಇರುವಾಗ ನಾನು ಯಾಕೆ ಕ್ಷಮೆ ಕೇಳಬೇಕು? ಈಗಾಗಲೇ ನಾನು ಈ ವಿಚಾರದ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಈ ಎಲ್ಲಾ ವಿಚಾರ ತಿಳಿದುಕೊಂಡು ನಾನು ತಪ್ಪು ಮಾಡಿದ್ದೇನೆ ಎಂದು ಅಭಿಮಾನಿಗಳು ಭಾವಿಸಿದರೆ ಅಭಿಮಾನಿಗಳ ಕ್ಷಮೆ ಕೇಳುತ್ತೇನೆ. ಆದರೆ, ಬೇರೆ ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.