ಮಾಜಿ ಸಚಿವ ಶಿವನಗೌಡ ನಾಯಕ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಇಲಾಖೆಗೆ ದೂರು ದಾಖಲಾಗಿದೆ.
ನವಿಲು ಗರಿಯಿಂದ ತಯಾರಿಸಿದ ಹಾರವನ್ನು ಸಾರ್ವಜನಿಕವಾಗಿ ಧರಿಸಿದ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂಬಂಧಿಸಿದಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲೇನಾಹಳ್ಳಿ, ಶಿವನಗೌಡ ನಾಯಕ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನವಿಲು ಗರಿಯ ಮಾರಾಟಕ್ಕೆ ಕರ್ನಾಟಕದಲ್ಲಿ ಅನುಮತಿ ಇರುವುದಿಲ್ಲ ಎಂದಿದ್ದಾರೆ.
ನವಿಲು ಭಾರತದ ರಾಷ್ಟ್ರೀಯ ಪಕ್ಷಿಯಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅನುಷ್ಠಾನ ಅಡಿಯಲ್ಲಿದೆ. ಕಾಯ್ದೆಯ ಪ್ರಕಾರ ನವಿಲು ಅಥವಾ ನವಿಲಿನ ಯಾವುದೇ ಭಾಗಗಳಾದ ಗರಿ, ಚರ್ಮ, ಅಥವಾ ಇನ್ಯಾವುದೋ ನೈಜವಾಗಿಯಾದರೂ ಅಥವಾ ಶಿಲ್ಪದ ರೂಪದಲ್ಲಾದರೂ ಸಂಗ್ರಹಿಸುವುದು, ಮಾರಾಟ ಮಾಡುವುದು, ಅಥವಾ ಸಾರ್ವಜನಿಕ ಪ್ರದರ್ಶನಕ್ಕೆ ಉಪಯೋಗಿಸುವುದು ಅಪರಾಧವಾಗಿದೆ.
ನವಿಲು ಗರಿ ಹಾರವನ್ನು ಧರಿಸುವ ಮೂಲಕ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ ಎಂದು ತಮ್ಮ ದೂರಿನಲ್ಲಿ ಅವರು ಉಲ್ಲೇಖಿಸಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಶಿವನಗೌಡ ನಾಯಕ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.