ಧಾರವಾಡ : “ಗುಡುಗು, ಸಿಡ್ಲು, ಮಿಂಚು, ಮಳಿ ಭಾಳ ಐತ್ರಿಪೋ ಭಾಳ… ಮಳಿ-ಬೆಳಿ ಸಂಪೈತ್ರಿಪೋ… ಹುಟ್ಟಿದ ಮಗುವಿಗೆ ಒಣಾ ರೋಗ ಐತ್ರಿಪೋ…ಭೂಮ್ಯಾಗ ಈ ವರ್ಷ ಕಾಳ್ರಿಪೋ ಕಾಳು…”
‘ದವನದ ಹುಣ್ಣಿಮೆ’ಯ ದಿನ (ಶನಿವಾರ) ತಾಲೂಕಿನ ಅಮ್ಮಿನಬಾವಿ ಗ್ರಾಮದ ಗುಡಿ ಓಣಿಯ ಪ್ಯಾಟಿ ಬಸವಣ್ಣ (ನಂದೀಶ್ವರ) ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸಂಜೆ ಭಕ್ತರ ಜಯಘೋಷಗಳ ಮಧ್ಯೆ ಜರುಗಿದ ಅಲಂಕೃತ ರಥೋತ್ಸವದ ಕೊನೆಗೆ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಪೂಜಾರ ವರ್ಷದ ಆಗು-ಹೋಗುಗಳ ಕುರಿತು ನುಡಿದ ಕಾರ್ಣಿಕವಿದು. ಈ ಕಾರ್ಣಿಕ ಆಲಿಸಿದ ರೈತರ ಮುಖದಲ್ಲಿ ಮಂದಹಾಸವಿತ್ತು. ತಾವು ಬೆಳೆಯುವ ಬೆಳೆಗಳಿಗೆ ಅಧಿಕ ಇಳುವರಿ ಪ್ರಾಪ್ತವಾಗುತ್ತದೆ ಎಂದವರು ಕಾರ್ಣಿಕವನ್ನು ವಿಶ್ಲೇಷಿಸಿದರು.
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಪರವಾಗಿ ಆಗಮಿಸಿದ್ದ ಈರಯ್ಯ ಹಿರೇಮಠ ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥೋತ್ಸವ ಆರಂಭಗೊಂಡಿತು. ಮರೇವಾಡ ಹಾಗೂ ಅಮ್ಮಿನಬಾವಿ ಬಸವಣ್ಣ ದೇವರ ನಂದಿಕೋಲು, ಪಲ್ಲಕ್ಕಿ, ಕರಡಿ ಮಜಲಿನೊಂದಿಗೆ ನಡೆದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ತೇರಿಗೆ ಉತ್ತತ್ತಿ ಮತ್ತು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಶನಿವಾರ ಪ್ರಾತಃಕಾಲದಲ್ಲಿ ಬಸವಣ್ಣ (ನಂದೀಶ್ವರ) ದೇವರ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಜರುಗಿದವು. ನಂತರ ಅನ್ನಸಂತರ್ಪಣೆ ನಡೆಯಿತು.