ಬಾಗಲಕೋಟೆ : ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ದಾಳಿ ಮಾಡಿರುವುದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಕೂಡಲಸಂಗಮದಲ್ಲಿ ಮಾತನಾಡಿದ ಅವರು, ಅಲ್ಲಿದ್ದ ಭದ್ರತೆಯನ್ನು ಯಾಕೆ ತೆಗೆಯಲಾಯಿತು? ಭದ್ರತಾ ವೈಫಲ್ಯ ಮುಚ್ಚಿಕೊಳ್ಳೋಕೆ ಇದೆಲ್ಲ ತೆಗೆದ್ರಾ? ಎಂದು ಪ್ರಶ್ನಿಸಿದ್ದಾರೆ. ಆ ಪ್ರದೇಶದಲ್ಲಿ ಮಿಲಿಟರಿ ಆಫಿಸರ್ ಇಲ್ಲ. ಪೊಲೀಸರು ಇರಲಿಲ್ಲ ಅಂತ ಅಲ್ಲಿ ಹೋಗಿ ಬಂದವರು ಹೇಳುತ್ತಿದ್ದಾರೆ. ಇವರಿಗೆ ನಾಚಿಕೆಯಾಗೋದಿಲ್ವಾ? ಸಿದ್ದರಾಮಯ್ಯ ಹೇಳಿದ್ದೇನು ಸದ್ಯಕ್ಕೆ ಯುದ್ದದ ಅವಶ್ಯಕತೆಯಿಲ್ಲ ಅಂತ. ರಾಜ್ಯ, ದೇಶ ಮೊದಲು ನಮಗೆ. ಅಮಾಯಕರು ಗುಂಡಿಗೆ ಬಲಿಯಾದಾಗ. ಸರ್ವಪಕ್ಷ ಸಭೆ ಕರೆದಾಗ ಪ್ರಧಾನಿಗಳು ಎಲ್ಲಿದ್ದರು? ಇದು ಸೌಜನ್ಯನಾ? ಎಂದು ಪ್ರಶ್ನಿಸಿದ್ದಾರೆ.
ದೇಶ ಕಣ್ಣೀರು ಸುರಿಸುತ್ತಿದ್ದರೆ, ಮೋದಿ ಬಿಹಾರ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದಾರೆ. ಅವರಿಗೆ ನಾಚಿಕೆ ಆಗಲ್ವಾ? ಅಮಾಯಕರ ಸಾವಿನ ಬಗ್ಗೆ ಚರ್ಚೆ ಮಾಡೋದು ಬಿಟ್ಟು. ನಿಮಗೆ ಚುನಾವಣೆಯೆ ಬಹಳ ಮುಖ್ಯ ಆಯ್ತಾ? ದೇಶಭಕ್ತಿ ಬಗ್ಗೆ, ಯುದ್ದ ಮಾಡುವುದರ ಬಗ್ಗೆ ಬಿಜೆಪಿಗರನ್ನು ಕೇಳುವ ಅವಶ್ಯಕತೆ ನಮಗಿಲ್ಲ. ಯಾವಾಗ ಯುದ್ದ ಮಾಡಿದ್ದಾರೆ ಇವರು ಹೇಳಿ. ಪಾಕಿಸ್ತಾನವನ್ನು ಮೋದಿ ಎಷ್ಟು ಬಾರಿ ಎದುರಿಸಿದ್ದಾರೆಯ ಇಂದಿರಾ ಗಾಂಧಿ ಏನು ಮಾಡಿದರು. ಎಷ್ಟು ಯುದ್ದ ಗೆದ್ದಿದ್ದೇವೆ? ಎಲ್ಲವೂ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.