ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ವಾರ್ಷಿಕ ವೇತನ ಹೆಚ್ಚಳದ ದಿನಕ್ಕಿಂತ ಒಂದು ದಿನ ಮೊದಲು ನಿವೃತ್ತಿ ಹೊಂದುವ ಕೇಂದ್ರ ಸರ್ಕಾರಿ ನೌಕರರಿಗೆ ಲಭಿಸುವ ಪಿಂಚಣಿಯನ್ನು ಲೆಕ್ಕ ಹಾಕಲು, ಕಾಲ್ಪನಿಕ ವೇತನವನ್ನು ಮಾನದಂಡವಾಗಿ ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದರಿಂದ 48.66 ಲಕ್ಷ ನೌಕರರಿಗೆ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.
ಕಾಲ್ಪನಿಕ ವೇತನದ ಮಾನದಂಡದ ಕುರಿತು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಳೇ ಕೇಂದ್ರ ಸಿಬ್ಬಂದಿ ಸಚಿವಾಲಯವು ಆದೇಶ ಹೊರಡಿಸಿದೆ. ಜುಲೈ 1 ಅಥವಾ ಜನವರಿ 1ಅನ್ನು ವೇತನ ಹೆಚ್ಚಳದ ದಿನಾಂಕವನ್ನಾಗಿ ಪರಿಗಣಿಸಬಹುದು ಎಂದು ಫೆಬ್ರುವರಿ 20ರಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸಲಹೆ ನೀಡಿತ್ತು. ಜೂನ್ 30 ಅಥವಾ ಡಿಸೆಂಬರ್ 31ರಂದು ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವ ನೌಕರರ ಪಿಂಚಣಿ ಲೆಕ್ಕ ಹಾಕಲು ಈ ದಿನಾಂಕಗಳನ್ನು ಪರಿಗಣಿಸುವಂತೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿತ್ತು.
ಹೊಸ ಆದೇಶದಂತೆ ಇನ್ನುಮುಂದೆ ಜುಲೈ 1 ಅಥವಾ ಜನವರಿ 1ಅನ್ನು ತಮ್ಮ ವೇತನ ಬಡ್ತಿಯ ದಿನಾಂಕವಾಗಿ ಆಯ್ಕೆ ಮಾಡಲು ನೌಕರರಿಗೆ ಅವಕಾಶ ಸಿಗಲಿದೆ. ಇದರಿಂದಾಗಿ ವೇತನ ಹೆಚ್ಚಳದ ಒಂದು ದಿನ ಮೊದಲೇ ನಿವೃತ್ತರಾದರೂ ಕಾಲ್ಪನಿಕ ವೇತನದ ಅನ್ವಯ ನೌಕರರು ಪಿಂಚಣಿ ಪಡೆಯಲಿದ್ದಾರೆ.
ಕೇಂದ್ರ ಸರ್ಕಾರದ ಆದೇಶವನ್ನು ಅಖಿಲ ಭಾರತ ಎನ್ಪಿಎಸ್ ನೌಕರರ ಒಕ್ಕೂಟದ ಅಧ್ಯಕ್ಷ ಮಂಜೀತ್ ಸಿಂಗ್ ಪಟೇಲ್ ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರದ ಆದೇಶವು ಸ್ವಾಗತಾರ್ಹವಾಗಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿ ಏಕೀಕೃತ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಕೇಂದ್ರ ಸರ್ಕಾರಿ ನೌಕರರಿಗೂ ಕಾಲ್ಪನಿಕ ವೇತನದ ಪ್ರಯೋಜನವನ್ನು ವಿಸ್ತರಿಸಬೇಕು ಎಂದು ಕೂಡ ಅವರು ಕೋರಿದ್ದಾರೆ. ಇದರ ಕುರಿತು ಸರ್ಕಾರ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.