ಬೆಂಗಳೂರು: ನಿವೃತ್ತ ಸೈನಿಕನ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪ ಹೊರ ಬಿದ್ದಿದೆ. ಮಗ ಅಷ್ಟೇ ಅಲ್ಲ, ಪತ್ನಿಯೂ ಕೊಲೆಯ ಹಿಂದೆ ಇದ್ದಾಳೆ ಎನ್ನಲಾಗಿದೆ.
ನಿವೃತ್ತ ಸೈನಿಕ ಇಸ್ಲಾಂ ಅರಬ್ ಕೊಲೆಯಾಗಿರುವ ವ್ಯಕ್ತಿ. ಹೆಂಡತಿ ಮತ್ತು ಪುತ್ರ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ನಗರದ ವಿವೇಕನಗರ ಬಸ್ ಸ್ಟಾಪ್ ಹಿಂಭಾಗದಲ್ಲಿ ಈ ಕೊಲೆ ನಡೆದಿದೆ. ಶನಿವಾರ ರಾತ್ರಿ 2.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ.
ಮಗ ಬೋಲು(19) ಅರಬ್ ಹಾಗೂ ತಾಯಿ ತಬಸ್ಸುಮ್(37) ರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸೊಲ್ಲಾಪುರದ ಇಸ್ಲಾಂ ಅರಬ್ ಬೆಂಗಳೂರಿನ ವಿವೇಕನಗರದಲ್ಲಿ ವಾಸವಾಗಿದ್ದ. ನಿವೃತ್ತ ಯೋಧನಾಗಿದ್ದು ಕಾಸು ಕೂಡಿಹಾಕಿ ಎರಡು ಅಂತಸ್ತಿನ ಮನೆ ಕಟ್ಟಿಸಿದ್ದ. ಪತ್ನಿ- ಪುತ್ರನೊಂದಿಗೆ ಗ್ರೌಂಡ್ ಪ್ಲೋರ್ ನಲ್ಲಿ ವಾಸಿಸುತ್ತಿದ್ದ. ಅಲ್ಲದೇ, ಎರಡು ಫ್ಲೋರ್ ಗಳನ್ನು ಬಾಡಿಗೆಗೆ ಕೊಟ್ಟಿದ್ದ. ಆದರೆ, ಇಸ್ಲಾಂ ಅರಬ್ ಅತಿಯಾದ ಜಿಪುಣನಾಗಿರುವುದರಿಂದಾಗಿ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಅಡುಗೆ ಏನ್ ಮಾಡಬೇಕು? ಯಾವ ಐಟಂ ಎಷ್ಟು ಬಳಸಬೇಕು ಎಂಬುವುದನ್ನು ಆತನೇ ನಿರ್ಧಾರ ಮಾಡುತ್ತಿದ್ದ.
ಆತ ಹೇಳಿದ್ದು ಬಿಟ್ಟು ಬೇರೆ ಅಡುಗೆ ಮಾಡಿದರೆ ಗಲಾಟೆ ಮಾಡುತ್ತಿದ್ದ. ಅಲ್ಲದೇ, ಪತ್ನಿ ಮೇಲೆ ಸದಾ ಸಂಶಯ ಪಡುತ್ತಿದ್ದ. ಪತ್ನಿ ಮನೆಯಿಂದ ಹೊರಗೆ ಬಂದರೆ ಸಂಶಯದಿಂದ ಗಲಾಟೆ ಮಾಡುತ್ತಿದ್ದ. ಮಗ ಖರ್ಚು ಮಾಡುವ ಪ್ರತಿ ರೂಪಾಯಿಗೂ ಲೆಕ್ಕ ಕೇಳುತ್ತಿದ್ದ. ಕಾಲೇಜಿನಿಂದ 5 ನಿಮಿಷ ತಡವಾಗಿ ಬಂದರೂ ಬಾಯಿಗೆ ಬಂದಂತೆ ಬೈದು, ಹೊಡೆಯುತ್ತಿದ್ದ. ಹೀಗಾಗಿ ತಾಯಿ- ಮಗ ರೋಸಿ ಹೋಗಿದ್ದರು ಎನ್ನಲಾಗಿದೆ. ಇದರಿಂದಾಗಿ ರೋಹಿ ಹೋದ ತಾಯಿ-ಮಗ ಕೊಲೆ ಮಾಡುವುದಕ್ಕೆ ಮೊದಲೇ ಪ್ಲಾನ್ ಮಾಡಿ ಶನಿವಾರ ರಾತ್ರಿ ಊಟದಲ್ಲಿ ಹತ್ತು ನಿದ್ರೆ ಮಾತ್ರೆ ಹಾಕಿದ್ದರಂತೆ. ಸತ್ತಿದ್ದಾನೆಂದು ಭಾವಿಸಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನೋಡಿದಾಗ ಉಸಿರಾಡುತ್ತಿದ್ದ ಎನ್ನಲಾಗಿದೆ.
ಹೀಗಾಗಿ ದಿಂಬಿನಿಂದ ಉಸಿರು ಗಟ್ಟಿಸಿ ತಾಯಿ- ಮಗ ಕೊಲೆ ಮಾಡಲು ಯತ್ನಿಸಿದ್ದಾರೆ. ಕೊನಗೆ ಕಿಟಕಿಗೆ ಗುದ್ದಿ, ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ನಂತರ ತಾಯಿ- ಮಗ ಮತ್ತೊಂದು ಕಥೆ ಕಟ್ಟಿದ್ದಾರೆ. ಪಕ್ಕದ ಮನೆಯವರಿಗೆ ಕರೆ ಮಾಡಿ ಯಾರೋ ಬಂದು ತಂದೆಯನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಐದು ಜನರ ಗ್ಯಾಂಗ್ ಬಂದು ಕೊಲೆ ಮಾಡಿದ್ದಾರೆಂದು ಕತೆ ಕಟ್ಟಿದ್ದಾರೆ. ಆನಂತರ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಮನೆ ಬಳಿ ಯಾರೂ ಬಂದಿರುವುದು ಪತ್ತೆಯಾಗಿಲ್ಲ. ಆದರೆ, ಮಗನೇ ಮನೆಯಿಂದ ಹೊರ ಬಂದಿದ್ದು, ಕೈಯಲ್ಲಿ ಬಟ್ಟೆ ರಕ್ತಸಿಕ್ತವಾಗಿಪುದು ಕಂಡು ಬಂದಿದೆ. ಆನಂತರ ತಾಯಿ ಮತ್ತು ಮಗನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಘಟನೆ ಬಯಲಿಗೆ ಬಂದಿದೆ.