ಸ್ಯಾಂಡಲ್ ವುಡ್ ಹಿರಿಯ ನಟರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮಡೆನೂರು ಮನುಗೆ ಬಿಗ್ ಶಾಕ್ ಎದುರಾಗಿದೆ. ಕನ್ನಡದ ಕಿರುತೆರೆ ಹಾಗೂ ಹಿರಿತೆರೆಯಿಂದ ಮಡೆನೂರು ಮನುಗೆ ಸಂಪೂರ್ಣ ಅಸಹಕಾರ ನೀಡಲಿದೆ ಎಂದು ಫಿಲಂ ಚೇಂಬರ್ ನಿರ್ಧರಿಸಿದೆ. ಸಹನಟಿಗೆ ಲೈಂಗಿಕ ದೌರ್ಜನ್ಯ, ಕಿರುಕುಳ ವಂಚನೆ ಪ್ರಕರಣದಲ್ಲಿ ನಟ ಮಡೆನೂರು ಮನು ಈಗ ಜೈಲು ಸೇರಿದ್ದಾರೆ. ಸಾಲು ಸಾಲು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಮನು ಸಿನಿಮಾ ಕನಸು ನುಚ್ಚುನೂರಾಗಿದೆ.

ನಟ ಮಡೆನೂರು ಮನು ಬಂಧನದ ಬಳಿಕ ನಟ ಶಿವರಾಜ್ ಕುಮಾರ್ ,ದರ್ಶನ್, ಧ್ರುವ ಸರ್ಜಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿತ್ತು. ಶಿವಣ್ಣ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಶಿವಣ್ಣನ ಅಭಿಮಾನಿಗಳು ದೂರು ಕೊಟ್ಟ ಬೆನ್ನಲ್ಲೇ ಫಿಲಂ ಚೇಂಬರ್ ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಕುರಿತು ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ , ನರಸಿಂಹಲು ಎಲ್ಲಾ ಸಂಸ್ಥೆಗಳನ್ನು ಕರೆದು ಸಭೆ ಮಾಡಿದ್ದೇವೆ. ದುರಹಂಕಾರಿ ಮಾತನ್ನು ಆಡಿದ್ದಾರೆ. ನಾವು ಅಸಹಕಾರ ತೋರಿಸಬೇಕು ಎಂದು ತೀರ್ಮಾನಿಸಲಾಗಿದೆ. ಅವರು ಯಾವುದೇ ರೀತಿಯಲ್ಲೂ ಚಟುವಟಿಕೆ ಮಾಡುವಂತಿಲ್ಲ ಎಂದರು.
ಇದೇ ವೇಳೆ ನಿರ್ಮಾಪಕ ಉಮೇಶ್ ಬಣಕರ್ ಮಾತನಾಡಿ ಮಡೆನೂರು ಮನು ಪ್ರಕರಣದ ಬಗ್ಗೆ ನಾವು ಕಾನೂನು ಪ್ರಕಾರವಾಗಿ ಕಂಪ್ಲೇಂಟ್ ಕೊಡುತ್ತೇವೆ. ಮನು ಸ್ಟಾರ್ ನಟರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರೋದು ತಪ್ಪು. ಈಗ ಸ್ಟೇಷನ್ನಲ್ಲಿ ಇದ್ದಾರೆ. ಈ ಬಗ್ಗೆ ಕೋರ್ಟ್ ಈಗಾಗಲೇ ತನಿಖೆ ನಡೆಸುತ್ತಿದೆ. ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ತೀರಿಕೊಂಡವರಿಗೆ ಪರಿಹಾರವನ್ನು ನೀಡಿದ್ದೇವೆ. ನಮ್ಮ ಫಿಲಂ ಚೇಂಬರ್ ನ ಸದಸ್ಯರಾಗಿದ್ದರೆ ಮಾತ್ರ ಪರಿಹಾರಗಳನ್ನು ನೀಡುತ್ತೇವೆ ಎಂದರು.