ನವದೆಹಲಿ: ಪಹಲ್ಗಾಮ್ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದ ಉಗ್ರರು ಈಗ ಮುಂಬರುವ ಅಮರನಾಥ ಯಾತ್ರೆಯ ಮೇಲೂ ಕೆಂಗಣ್ಣು ಬೀರಿರುವ ಶಂಕೆಯಿದೆ. ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುವ ಸಾಧ್ಯತೆ ಅಧಿಕವಾಗಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. ಈ ಕುರಿತು ಎಲ್ಲ ಸ್ಥಳೀಯ ಪೊಲೀಸ್ ಠಾಣೆಗಳು ಮತ್ತು ಕೇಂದ್ರ ಭದ್ರತಾ ಪಡೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್(ಟಿಆರ್ಎಫ್) ಅಮರನಾಥ ಯಾತ್ರಿಕರ ಮೇಲೆ ದಾಳಿಗೆ ಸಂಚು ರೂಪಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಆಂಗ್ಲ ಸುದ್ದಿವಾಹಿನಿಗಳು ವರದಿ ಮಾಡಿವೆ. ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲೂ ಇದೇ ಸಂಘಟನೆ ದಾಳಿ ನಡೆಸಿತ್ತು.
ದಾಳಿ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಅಮರನಾಥ ಯಾತ್ರೆಯ ಹಾದಿಯುದ್ದಕ್ಕೂ ಬಿಗಿ ಭದ್ರತೆ ಕೈಗೊಂಡಿದೆ. ಪಹಲ್ಗಾಮ್ ದಾಳಿಕೋರರು ಇನ್ನೂ ತಲೆಮರೆಸಿಕೊಂಡಿದ್ದು, ಅವರಾರೂ ಇನ್ನೂ ಸೆರೆಸಿಕ್ಕಿಲ್ಲ. ಅವರು ಈಗಲೂ ಪೀರ್ ಪಾಂಜಾಲ್ ಅರಣ್ಯದಲ್ಲಿ ಅಡಗಿಕೊಂಡು ಮತ್ತೊಂದು ದಾಳಿಗೆ ಸಂಚು ರೂಪಿಸುತ್ತಿರಬಹುದು ಎಂಬ ಅನುಮಾನವಿದೆ. ಅಮರನಾಥ ಯಾತ್ರಿಕರು ಪವಿತ್ರ ಗುಹೆಗೆ ತಲುಪಬೇಕೆಂದರೆ ಪಹಲ್ಗಾಮ್ ದಾರಿಯ ಮೂಲಕವೇ ಸಾಗಬೇಕು. ಪ್ರತಿ ದಿನ 15 ಸಾವಿರ ಮಂದಿ ಈ ದಾರಿಯಲ್ಲಿ ಸಾಗಿದರೆ, 15 ಸಾವಿರ ಮಂದಿ ಬಲ್ತಾಲ್ ಹಾದಿಯ ಮೂಲಕ ಸಾಗುತ್ತಾರೆ.
ದಾಳಿ ಬೆದರಿಕೆಯಿರುವ ಹಿನ್ನೆಲೆಯಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳು ಪರಿಸ್ಥಿತಿ ಮೇಲೆ ನಿಗಾ ಇರಿಸಿದ್ದಾರೆ. ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಮತ್ತು ಸಿಆರ್ಪಿಎಫ್ ಪ್ರಧಾನ ನಿರ್ದೇಶಕರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಯಾತ್ರೆಯ ಭದ್ರತಾ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ್ದಾರೆ. ಇದಲ್ಲದೇ ಗುಪ್ತಚರ ಬ್ಯೂರೋದ ಪ್ರಮುಖ ಅಧಿಕಾರಿಗಳು ಕೂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಪ್ರದೇಶವನ್ನು ಹಾರಾಟ ನಿಷೇಧ ವಲಯವೆಂದು ಘೋಷಿಸಲಾಗಿದ್ದು, ಯಾತ್ರಿಕರಿಗೆ ಹೆಲಿಕಾಪ್ಟರ್ ಸೇವೆಯನ್ನೂ ಈ ವರ್ಷ ನಿರ್ಬಂಧಿಸಲಾಗಿದೆ. ಉಗ್ರರ ದಾಳಿ ಭೀತಿಯಿಂದ ಅನೇಕ ಯಾತ್ರಿಕರು ತಮ್ಮ ಯಾತ್ರೆಯನ್ನು ರದ್ದು ಮಾಡುವ ಭೀತಿಯೂ ಎದುರಾಗಿದೆ ಎಂದೂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.