ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ತಹಾವೂರ್ ರಾಣಾನನ್ನು(Tahawwur Rana) 18 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ ಒಪ್ಪಿಸುವ ವೇಳೆ ಪಟಿಯಾಲಾ ಹೌಸ್ ಕೋರ್ಟ್ ನೀಡಿರುವ ಆದೇಶವೊಂದು ಕುತೂಹಲಕ್ಕೆ ಕಾರಣವಾಗಿದೆ. ಎನ್ಐಎ ವಿಶೇಷ ನ್ಯಾಯಾಲಯವು ಆರೋಪಿ ತಹಾವೂರ್ ರಾಣಾನಿಗೆ ಕೇವಲ ಮೆದುವಾದ ಟಿಪ್ ಇರುವ ಪೆನ್ ಅನ್ನು ಮಾತ್ರವೇ ಬಳಸಲು ಅವಕಾಶ ನೀಡಿದೆ.
ಇದು ಯಾಕೆ ಗೊತ್ತಾ?
ಕಸ್ಟಡಿಯಲ್ಲಿರುವ ವೇಳೆ ಆರೋಪಿಯು ತನಗೆ ತಾನೇ ಹಲ್ಲೆ ಮಾಡಿಕೊಳ್ಳುವ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಚೂಪಾದ ವಸ್ತುಗಳು ಕೈಗೆ ಸಿಕ್ಕರೆ ಅದನ್ನೇ ದೇಹಕ್ಕೆ ಚುಚ್ಚಿಕೊಂಡು ಹಾನಿ ಮಾಡಿಕೊಳ್ಳಲೂಬಹುದು. ಈ ಹಿನ್ನೆಲೆಯಲ್ಲಿ ಅಪರಾಧಿಗಳು ಅಥವಾ ಆರೋಪಿಗಳ ಕೈಗೆ ಚೂಪಾದ ಯಾವುದೇ ವಸ್ತು ಸಿಗದಂತೆ ನೋಡಿಕೊಳ್ಳಲಾಗುತ್ತದೆ. ಈ ಪ್ರಕರಣದಲ್ಲೂ ರಾಣಾ ಆತ್ಮಹತ್ಯೆಗೆ ಯತ್ನಿಸದಂತೆ ತಡೆಯುವ ನಿಟ್ಟಿನಲ್ಲಿ ಈ ಆದೇಶ ನೀಡಲಾಗಿದೆ. ಪೆನ್ನಿನ ತುದಿಯು ಚೂಪಾಗಿ, ಗಟ್ಟಿಯಾಗಿದ್ದರೆ ಅದನ್ನು ಚುಚ್ಚಿಕೊಳ್ಳುವ ಸಾಧ್ಯತೆ ಇರುವ ಕಾರಣ, ಮೆದುವಾದ ತುದಿಯುಳ್ಳ ಪೆನ್ ಅನ್ನು ಮಾತ್ರವೇ ಬಳಸುವಂತೆ ಆಜ್ಞಾಪಿಸಲಾಗಿದೆ.
ಎನ್ಐಎ ಕಸ್ಟಡಿಯಲ್ಲಿರುವ ರಾಣಾನನ್ನು ಎನ್ಐಎ ಪ್ರಧಾನ ಕಚೇರಿಯ ಕೆಳಮಹಡಿಯಲ್ಲಿರುವ ವಿಶೇಷ ಹಾಗೂ ಅತ್ಯಧಿಕ ಭದ್ರತೆಯ ಕೋಣೆಯಲ್ಲಿ ಇರಿಸಲಾಗಿದೆ. ಈ ಕೋಣೆಯು ಈಗ ಪೊಲೀಸರ ಭದ್ರಕೋಟೆಯಾಗಿ ಪರಿಣಮಿಸಿದೆ. ದಿನದ 24 ಗಂಟೆಯೂ ಇದಕ್ಕೆ ಸಿಸಿಟಿವಿ ಹಾಗೂ ಅರೆಸೇನಾ ಪಡೆಗಳ ಕಣ್ಗಾವಲು ಏರ್ಪಡಿಸಲಾಗಿದೆ. ಇದರೊಳಗೆ ಒಂದು ಸೊಳ್ಳೆಯೂ ನುಸುಳದಂತೆ ಬಿಗಿಭದ್ರತೆಯನ್ನು ಏರ್ಪಡಿಸಲಾಗಿದೆ. ಬಹುಹಂತದ ಡಿಜಿಟಲ್ ಭದ್ರತಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. 12 ಮಂದಿ ಎನ್ಐಎ ಅಧಿಕಾರಿಗಳನ್ನು ಹೊರತುಪಡಿಸಿ ಯಾರೊಬ್ಬರೂ ಈ ಕೋಣೆಯನ್ನು ಪ್ರವೇಶಿಸುವಂತಿಲ್ಲ. ಉಗ್ರ ರಾಣಾ ಪರ ವಕೀಲರು ಕೂಡ ಎನ್ಐಎ ಅಧಿಕಾರಿಗಳ ಸಮ್ಮುಖದಲ್ಲೇ ತನ್ನ ವಕೀಲರನ್ನು ಭೇಟಿಯಾಗಬೇಕಿದೆ. ಎಲ್ಲಾ ಮೂಲಭೂತ ಅಗತ್ಯಗಳಾದ ಊಟ, ಕುಡಿಯುವ ನೀರು, ವೈದ್ಯಕೀಯ ಸಾಮಗ್ರಿಗಳನ್ನು ಒಳಗೇ ತಲುಪಿಸಲಾಗುತ್ತಿದೆ.
ಮುಂಬೈ ದಾಳಿಯ ಸಂಚುಕೋರ ರಾಣಾನನ್ನು ಹೊತ್ತ ವಿಶೇಷ ವಿಮಾನ ಅಮೆರಿಕದಿಂದ ಗುರುವಾರ ರಾತ್ರಿ ನವದೆಹಲಿಗೆ ಬಂದಿಳಿದಿತ್ತು. ಆನಂತರ ಅವನನ್ನು ವಶಕ್ಕೆ ಪಡೆದ ಎನ್ಐಎ ಅಧಿಕಾರಿಗಳು, ಅಂದು ರಾತ್ರಿಯೇ ಪಟಿಯಾಲಾ ಹೌಸ್ ನ್ಯಾಯಾಲಕ್ಕೆ ಹಾಜರುಪಡಿಸಿದ್ದರು. ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಸೇರಿದಂತೆ ಆರೋಪಿಗಳ ಪಾತ್ರಗಳನ್ನು ಬಾಯಿಬಿಡಿಸಲು ರಾಣಾನನ್ನು 20 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಎನ್ಐಎ ಮನವಿ ಮಾಡಿತ್ತು. ಆದರೆ, ನ್ಯಾಯಾಲಯ ಆತನನ್ನು 18 ದಿನಗಳ ಕಾಲ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು.