ಬೆಂಗಳೂರು: ಸ್ಪೀಕರ್ ಆಡಳಿತ ಪಕ್ಷದ ಕೈಗೊಂಬೆಯಾಗಿ ವರ್ತಿಸಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಮನವಿ ಮಾಡಿದ್ದಾರೆ.
ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಬಿಜೆಪಿ ಶಾಸಕರ ನಿಯೋಗವು ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ವಿಷಯದಲ್ಲಿ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಲಾಗಿದ್ದು, ಸ್ಪೀಕರ್ ಅವರು ಇದಕ್ಕೆ ಬೆಂಬಲ ಕೊಡಬಾರದು ಎಂದು ಒತ್ತಾಯಿಸಿದರು.
ಆಡಳಿತ ಪಕ್ಷಕ್ಕೆ ಮನವರಿಕೆ ಮಾಡಿ ಸ್ಪೀಕರ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರು. ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ರಾಜ್ಯಪಾಲರು ಇದರಲ್ಲಿ ಮಧ್ಯಸ್ಥಿಕೆ ವಹಿಸಬೇಕು. ಸರಕಾರಕ್ಕೆ ಬುದ್ಧಿ ಹೇಳಬೇಕೆಂದು ಕೋರಿದ್ದಾಗಿ ವಿವರಿಸಿದರು.
ಇತ್ತೀಚೆಗೆ ನಡೆದ ಸದನದ ಕಲಾಪದಲ್ಲಿ ಬಿಜೆಪಿಯ 18 ಶಾಸಕರ ಅಮಾನತು ಕೂಡ ಆಗಿದೆ. ಹಲವಾರು ಬಾರಿ ವಿಪಕ್ಷದ ನಾಯಕರು ಮತ್ತು ಶಾಸಕರು ಸಭಾಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿದರೂ ಶಾಸಕರ ಅಮಾನತನ್ನು ಹಿಂಪಡೆದಿಲ್ಲ ಎಂದರು. ಸ್ಪೀಕರ್ ಅವರು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದು, 18 ಶಾಸಕರ ಅಮಾನತು ತಮ್ಮೊಬ್ಬರ ತೀರ್ಮಾನ ಅಲ್ಲ ಎಂದಿದ್ದಾರೆ ಎಂದು ಗಮನ ಸೆಳೆದರು.
ಅವಿವೇಕತನದ ಹೇಳಿಕೆ ಬಿಟ್ಟು ದೇಶದ ಪರವಾಗಿ ನಿಲ್ಲಲು ಆಗ್ರಹ
ಮುಖ್ಯಮಂತ್ರಿಗಳೇ ಯುದ್ಧ ಬೇಡ ಎಂದು ಹೇಳಿಕೆ ಕೊಟ್ಟಿದ್ದಾರೆ. ಉಳಿದಂತೆ ತಿಮ್ಮಾಪುರ, ಸಂತೋಷ್ ಲಾಡ್ ಅವರು ಇದೇ ಧಾಟಿಯಲ್ಲಿ ಮಾತನಾಡುವುದರಲ್ಲಿ ವಿಶೇಷ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬೆಂಬಲ ಕೊಡುವುದಾಗಿ ಕಾಂಗ್ರೆಸ್ ಪಕ್ಷದ (ಎಐಸಿಸಿ) ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರು ಹೇಳಿದ್ದಾರೆ. ಪಾಕ್ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅಗತ್ಯ ಎಂದು ಕಾಂಗ್ರೆಸ್ಸಿನ ಹಿರಿಯ ಸಂಸದ ಶಶಿ ತರೂರ್ ಹೇಳಿದ್ದಾರೆ. ಇದನ್ನು ಈಗಲಾದರೂ ಅರ್ಥ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿಗಳಿಗೆ ಮತ್ತು ಸಚಿವ ಸಂಪುಟದ ಸದಸ್ಯರಿಗೆ ತಿಳಿಸಿದರು. ಅವಿವೇಕತನದ ಹೇಳಿಕೆ ಬಿಟ್ಟು ದೇಶದ ಪರವಾಗಿ ನಿಲ್ಲಬೇಕೆಂದು ಮುಖ್ಯಮಂತ್ರಿಗಳು ಮತ್ತು ತಿಮ್ಮಾಪುರ ಅವರಿಗೆ ಆಗ್ರಹಿಸಿದರು.