ಸೂರತ್: ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್ಗಟ್ಟಲೆ ಫಾಲೋಯರ್ಸ್ ಹೊಂದಿರುವ ಗ್ಲಾಮರಸ್ ಲೋಕದ ತಾರೆ, ಇನ್ಫ್ಲುಯೆನ್ಸರ್ ಕೀರ್ತಿ ಪಟೇಲ್. ಈಕೆಯ ಪೋಸ್ಟ್ಗಳಿಗೆ, ರೀಲ್ಗಳಿಗೆ ಹರಿದುಬರುತ್ತಿದ್ದ ಲೈಕ್ಗಳು, ಕಾಮೆಂಟ್ಗಳು ಅಷ್ಟಿಷ್ಟಲ್ಲ.
ಆದರೆ, ಈ ವರ್ಣರಂಜಿತ ಮುಖವಾಡದ ಹಿಂದೆ ಒಂದು ಕರಾಳ ಅಪರಾಧ ಲೋಕ ಅಡಗಿತ್ತು ಎಂಬ ಸತ್ಯ ಇದೀಗ ಬಯಲಾಗಿದ್ದು, ಸೂರತ್ ಪೊಲೀಸರು ಆಕೆಯನ್ನು ‘ಹನಿಟ್ರ್ಯಾಪ್’ ಆರೋಪದ ಮೇಲೆ ಬಂಧಿಸಿದ್ದಾರೆ. ಜನಪ್ರಿಯತೆಯ ಅಂಧಕಾರದಲ್ಲಿ ಸಿಲುಕಿ, ಹಣದ ಆಸೆಗೆ ಬಿದ್ದು, ಅಪರಾಧ ಲೋಕಕ್ಕಿಳಿದ ಕೀರ್ತಿ ಪಟೇಲ್ ಪ್ರಕರಣ ಇದೀಗ ಗುಜರಾತ್ನಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.
ಬಿಲ್ಡರ್ಗೆ ಬಲೆ ಬೀಸಿದ ಹನಿಟ್ರ್ಯಾಪ್ ಜಾಲ
ಸೂರತ್ನ ವಾರಾಚಾ ಪೊಲೀಸರಿಗೆ ಸ್ಥಳೀಯ ಬಿಲ್ಡರ್ ಒಬ್ಬರು ನೀಡಿದ ದೂರಿನಿಂದ ಈ ಜಾಲದ ಬಣ್ಣ ಬಯಲಾಗಿದೆ. ಬಿಲ್ಡರ್ ತನ್ನ ದೂರಿನಲ್ಲಿ ನೀಡಿರುವ ಮಾಹಿತಿಯಂತೆ, ಕೀರ್ತಿ ಪಟೇಲ್ ಆ ಬಿಲ್ಡರ್ನೊಂದಿಗೆ ಸ್ನೇಹ ಬೆಳೆಸಿಕೊಂಡು, ತನ್ನ ನಗು, ಆಕರ್ಷಕ ಮಾತುಗಳಿಂದ ಆತನನ್ನು ಆಕರ್ಷಿಸಿ, ಒಂದು ದಿನ ಭೇಟಿಯಾಗಲು ನಿರ್ದಿಷ್ಟ ಸ್ಥಳಕ್ಕೆ ಆಹ್ವಾನಿಸಿದ್ದಳು.

ಬಿಲ್ಡರ್ ಅಲ್ಲಿಗೆ ಬಂದಾಗ, ಕೀರ್ತಿ ಪಟೇಲ್ ಮತ್ತು ಆಕೆಯ ನಾಲ್ವರು ಸಹಚರರು ಅನಿರೀಕ್ಷಿತವಾಗಿ ಬಿಲ್ಡರ್ನನ್ನು ಸುತ್ತುವರಿದು, ಆತನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ, “ನಮಗೆ 10 ಕೋಟಿ ರೂಪಾಯಿಗಳನ್ನು ಕೊಡಬೇಕು”ಎಂದು ಬೆದರಿಕೆ ಹಾಕಿದ್ದಾರೆ! ಆ ಕ್ಷಣಕ್ಕೆ 1 ಕೋಟಿ ರೂ. ನೀಡದಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಆತನ ಮಾನಹಾನಿ ಮಾಡುವುದಾಗಿ, ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಹೆದರಿಸಿದ್ದಾರೆ.
ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?
ಬಿಲ್ಡರ್, ತಕ್ಷಣ ಬುದ್ಧಿ ಉಪಯೋಗಿಸಿ, ತನ್ನ ಬಳಿ ಸದ್ಯಕ್ಕೆ 1 ಕೋಟಿ ರೂ. ಇಲ್ಲ ಎಂದು ಹೇಳಿ ಆ ಕ್ಷಣಕ್ಕೆ 25 ಲಕ್ಷದ ಚೆಕ್ ಬರೆದು ನೀಡಿದ್ದಾರೆ. ಆದರೆ, ಕೀರ್ತಿ ಪಟೇಲ್ನ ಸಹಚರರು ಚೆಕ್ ಅನ್ನು ನಗದೀಕರಿಸಲು ಬ್ಯಾಂಕ್ಗೆ ಹೋದಾಗ, ಖಾತೆಯಲ್ಲಿ ಸಾಕಷ್ಟು ಹಣವಿಲ್ಲ ಎಂಬುದು ತಿಳಿದುಬಂದಿದೆ. ಇದರಿಂದ ಕೋಪಗೊಂಡ ಗ್ಯಾಂಗ್, ಮತ್ತೆ ಬಿಲ್ಡರ್ಗೆ ಕರೆ ಮಾಡಿ, ಉಳಿದ ಹಣ ನೀಡುವಂತೆ ಒತ್ತಡ ಹಾಕತೊಡಗಿದ್ದಾರೆ.
ಈ ಘಟನೆಗಳಿಂದ ಕಂಗೆಟ್ಟ ಬಿಲ್ಡರ್ ಕೊನೆಗೂ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಕೀರ್ತಿ ಪಟೇಲ್ ಮತ್ತು ಆಕೆಯ ಸಹಚರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದ್ದು, ಈ ಹನಿಟ್ರ್ಯಾಪ್ ಜಾಲದಲ್ಲಿ ಇನ್ನುಳಿದವರು ಯಾರಿದ್ದಾರೆ, ಎಷ್ಟು ಜನರನ್ನು ಅವರು ಬಲೆಗೆ ಕೆಡವಿದ್ದಾರೆ ಎಂಬ ಬಗ್ಗೆ ಕೂಲಂಕಶ ಪರಿಶೀಲನೆ ನಡೆಯುತ್ತಿದೆ. ಕೀರ್ತಿ ಪಟೇಲ್ ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳು ಮತ್ತು ಸಂಪರ್ಕಗಳನ್ನೂ ಪೊಲೀಸರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮತ್ತಷ್ಟು ಸಂಚುಗಳು ಹೊರಬೀಳುವ ಸಾಧ್ಯತೆಯಿದೆ.
ಜನಪ್ರಿಯತೆಯ ಉತ್ತುಂಗದಲ್ಲಿದ್ದ ಇನ್ಫ್ಲುಯೆನ್ಸರ್ನ ಈ ಕರಾಳ ಮುಖ, ಸಾಮಾಜಿಕ ಜಾಲತಾಣಗಳ ಗ್ಲಾಮರ್ ಲೋಕದ ಇನ್ನೊಂದು ಮುಖವನ್ನು ಅನಾವರಣಗೊಳಿಸಿದೆ. ಈ ಪ್ರಕರಣ ಯಾವ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕು.