ನವದೆಹಲಿ: ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ವಿಧೇಯಕಗಳಿಗೆ ಅಂಕಿತ ಹಾಕಲು ರಾಜ್ಯಪಾಲರಿಗೆ ಕಾಲಮಿತಿ ನಿಗದಿಪಡಿಸಿತ್ತು. ಇದೇ ತೀರ್ಪಿನಲ್ಲಿ ರಾಷ್ಟ್ರಪತಿಗಳಿಗೂ ಸರ್ವೋಚ್ಚ ನ್ಯಾಯಾಲಯ ನಿಗದಿತ ಕಾಲಮಿತಿ ನಿಗದಿಪಡಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಮಂಗಳವಾರ ನೀಡಿದ್ದ ತೀರ್ಪಿನ ಪ್ರತಿ ಶುಕ್ರವಾರ ಹೊರಬಿದ್ದಿದ್ದು, ಇದರಲ್ಲಿ ಈ ಐತಿಹಾಸಿಕ ತೀರ್ಪಿನ ಅಂಶಗಳು ಬಹಿರಂಗವಾಗಿವೆ.
ತಮಿಳುನಾಡಿನ ಪ್ರಕರಣದಲ್ಲಿ ತೀರ್ಪು ನೀಡುವ ವೇಳೆ ನ್ಯಾ.ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಸಂವಿಧಾನದ 201ನೇ ವಿಧಿಯಡಿ ರಾಷ್ಟ್ರಪತಿಗಳ ಕರ್ತವ್ಯನಿರ್ವಹಣೆಯೂ ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಸ್ತುತ ಇರುವ 201ನೇ ವಿಧಿಯ ಅನ್ವಯ, ರಾಜ್ಯಪಾಲರು ಯಾವುದೇ ವಿಧೇಯಕವನ್ನು ರಾಷ್ಟ್ರಪತಿಗಳ ಪರಿಶೀಲನೆಗೆಂದು ಬಾಕಿ ಉಳಿಸಿಕೊಂಡಿದ್ದರೆ, ರಾಷ್ಟ್ರಪತಿಗಳು ಒಂದೋ ಆ ವಿಧೇಯಕಕ್ಕೆ ಅಂಕಿತ ಹಾಕಬೇಕು ಅಥವಾ ನಿರಾಕರಿಸಬೇಕು. ಆದರೆ, ಇದಕ್ಕೆ ಸಂವಿಧಾನದಲ್ಲಿ ಯಾವುದೇ ಕಾಲಮಿತಿ ನಿಗದಿಯಾಗಿಲ್ಲ.
“ಕಾನೂನಿನ ಅಡಿಯಲ್ಲಿ ಯಾವುದೇ ಅಧಿಕಾರವನ್ನು ಚಲಾಯಿಸಲು ಕಾಲಮಿತಿ ನಿಗದಿಪಡಿಸದಿದ್ದರೂ, ಅದನ್ನು ಸಮಂಜಸವಾದ ಸಮಯದೊಳಗೆ ಚಲಾಯಿಸಬೇಕಾಗುತ್ತದೆ. ಅನುಚ್ಛೇದ 201 ರ ಅಡಿಯಲ್ಲಿ ರಾಷ್ಟ್ರಪತಿಗಳು ಚಲಾಯಿಸುವ ಅಧಿಕಾರವೂ ಈ ಸಾಮಾನ್ಯ ತತ್ವದಿಂದ ಹೊರತಾಗಿದೆ ಎಂದು ಹೇಳಲಾಗದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ, ರಾಜ್ಯಪಾಲರು ಕಳುಹಿಸಿದ ವಿಧೇಯಕಗಳಿಗೆ ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ಅಂಕಿತ ಹಾಕಬೇಕು ಅಥವಾ ತಿರಸ್ಕರಿಸಬೇಕು. ಮೂರು ತಿಂಗಳಿಗಿಂತ ಹೆಚ್ಚು ವಿಳಂಬವಾದರೆ, ಅದಕ್ಕೆ ಸಮರ್ಪಕ ಕಾರಣಗಳನ್ನು ಪಟ್ಟಿ ಮಾಡಿ, ಆಯಾ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಬೇಕು ಎಂದೂ ನ್ಯಾಯಪೀಠ ಹೇಳಿದೆ.
ರಾಷ್ಟ್ರಪತಿಗಳ ನಿರ್ಧಾರದ ವಿರುದ್ಧ ಕೋರ್ಟ್ ಮೊರೆಹೋಗುವ ಅವಕಾಶ
ನಿಗದಿತ ಕಾಲಮಿತಿಯೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆಹೋಗುವ ಅವಕಾಶವು ರಾಜ್ಯ ಸರ್ಕಾರಗಳಿಗೆ ಇರುತ್ತದೆ. ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆಗಳಿಂದಾಗಿ ಮಸೂದೆಯನ್ನು ಕಾಯ್ದಿರಿಸಿದರೆ, ಕಾರ್ಯಾಂಗವು ನ್ಯಾಯಾಲಯಗಳ ಪಾತ್ರವನ್ನು ವಹಿಸಬಾರದು ಎಂದೂ ಉನ್ನತ ನ್ಯಾಯಾಲಯ ಒತ್ತಿಹೇಳಿದೆ. ಅಂತಹ ಪ್ರಶ್ನೆಗಳನ್ನು ಅನುಚ್ಛೇದ 143 ರ ಅಡಿಯಲ್ಲಿ ಸುಪ್ರೀಂ ಕೋರ್ಟ್ಗೆ ಉಲ್ಲೇಖಿಸಬೇಕು ಎಂದೂ ಅದು ಹೇಳಿದೆ.
ಡಿಎಂಕೆ ಸರ್ಕಾರವು ವಿಧಾನಸಭೆಯಲ್ಲಿ ಅಂಗೀಕರಿಸಿದ್ದ 10 ವಿಧೇಯಕಗಳಿಗೆ ಅಂಕಿತ ಹಾಕದೇ ಸತಾಯಿಸಿದ್ದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರ ಕ್ರಮವು ಅಸಾಂವಿಧಾನಿಕ ಮತ್ತು ನಿರಂಕುಶ ಎಂದು ತೀರ್ಪು ನೀಡುವ ವೇಳೆ ಸುಪ್ರೀಂ ಕೋರ್ಟ್ ಈ ಆದೇಶವನ್ನೂ ನೀಡಿದೆ.