ಶ್ರೀನಗರ: ಭೂಲೋಕದ ಸ್ವರ್ಗ ಎಂದೇ ಖ್ಯಾತಿಯಾಗಿದ್ದ ಕಾಶ್ಮೀರವೀಗ ಅಕ್ಷರಶಃ ನರಕವಾಗಿದೆ. ಪಹಲ್ಗಾಂನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ 26 ಮಂದಿ ಬಲಿಯಾಗಿದ್ದಾರೆ. ದೇಶಾದ್ಯಂತ ದಾಳಿಯ ಕುರಿತು ಜನಾಕ್ರೋಶ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ದಾಳಿಯಲ್ಲಿ ಮೃತಪಟ್ಟ 26 ಮಂದಿಯಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರೂ ಇದ್ದಾರೆ. ಇವರು ಏಳು ದಿನಗಳ ಹಿಂದಷ್ಟೇ ಮದುವೆಯಾಗಿದ್ದರು ಎಂಬ ಮನಕಲಕುವ ಸಂಗತಿ ಬಯಲಾಗಿದೆ.
ಹೌದು, ಪಹಲ್ಗಾಂನಲ್ಲಿ ನಡೆದ ಉಗ್ರರ ದಾಳಿಯಲ್ಲಿ ವಿನಯ್ ನರ್ವಾಲ್ ಎಂಬ 26 ವರ್ಷದ ನೌಕಾಪಡೆ ಅಧಿಕಾರಿಯೂ ಮೃತಪಟ್ಟಿದ್ದಾರೆ. ಹರಿಯಾಣದ ಕರ್ನಾಲ್ ಜಿಲ್ಲೆಯವರಾದ ವಿನಯ್ ನರ್ವಾಲ್ ಅವರು ಏಳು ದಿನಗಳ ಹಿಂದಷ್ಟೇ ಮದುವೆಯಾಗಿದ್ದರು. ಮದುವೆ ಬಳಿಕ ಅವರು ದಾಂಪತ್ಯದ ಸುಮಧುರ ಕ್ಷಣಗಳನ್ನು ಕಳೆಯಲು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ಆದರೆ, ವಿಧಿಯು ಇವರ ಬಾಳಿನಲ್ಲಿ ಆಟವಾಡಿದ್ದು, ನರ್ವಾಲ್ ಶವದ ಮುಂದೆ ಕುಳಿತು ಪತ್ನಿ ದುಃಖಿಸುತ್ತಿರುವ ಫೋಟೋ ಈಗ ಭಾರಿ ಸಂಚಲನ ಮೂಡಿಸಿದೆ.
ವಿನಯ್ ನರ್ವಾಲ್ ಅವರು ಎರಡು ವರ್ಷಗಳ ಹಿಂದೆ ಭಾರತೀಯ ನೌಕಾಪಡೆ ಸೇರಿದ್ದರು. ಇವರು ಏಪ್ರಿಲ್ 16ರಂದು ಮದುವೆಯಾಗಿದ್ದರು. ಕೊಚ್ಚಿಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಈಗ ಮದುವೆ ವೇಳೆ ವಿನಯ್ ನರ್ವಾಲ್ ಅವರ ಪತ್ನಿ ಹಚ್ಚಿಕೊಂಡ ಮೆಹೆಂದಿ ಮಾಸುವ ಮುನ್ನವೇ ಪತಿಯನ್ನು ಅವರು ಕಳೆದುಕೊಂಡಿದ್ದಾರೆ.
ಲಷ್ಕರೆ ತಯ್ಬಾ ಸಂಚು
ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರರ ದಾಳಿಗೆ ಲಷ್ಕರೆ ತಯ್ಬಾ ಉಗ್ರ ಸಂಘಟನೆಯೇ ಸಂಚು ರೂಪಿಸಿದೆ ಎಂದು ತಿಳಿದುಬಂದಿದೆ. ಲಷ್ಕರೆ ತಯ್ಬಾದ ಅಂಗಸಂಸ್ಥೆಯಾದ ದಿ ರೆಸಿಸ್ಟನ್ಸ್ ಫ್ರಂಟ್ ಉಗ್ರರೇ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇವರು ಹಲವು ದಿನಗಳಿಂದ ಸಂಚು ರೂಪಿಸಿ, ಪ್ರವಾಸಿಗರ ಚಲನವಲನಗಳನ್ನು ಗಮನಿಸಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.