ಬೆಂಗಳೂರು: ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಪತ್ರ ಬರೆದಿದ್ದಾರೆ.
ಈ ದುರ್ಘಟನೆ ನಮ್ಮ ಸರಕಾರಕ್ಕೆ, ಬೆಂಗಳೂರಿಗರಿಗೆ, ಕ್ರಿಕೆಟ್ ಪ್ರೇಮಿಗಳಿಗೆ ಆಘಾತ ಉಂಟು ಮಾಡಿದೆ. ಆದರೆ, ಘಟನೆ ಬಗ್ಗೆ ಸಾರ್ವಜನಿಕರಿಂದ ಅಥವಾ ಸರಕಾರದಿಂದ ವೈಪರೀತ್ಯದ ಪ್ರತಿಕ್ರಿಯೆ ಬಂದಿದೆ. ಬೆಂಗಳೂರು ಪ್ರಮುಖವಾಗಿ ಕ್ರಿಕೆಟ್ ಕ್ಷೇತ್ರದಲ್ಲಿ ಅತ್ಯುತ್ತಮ ಹೆಸರನ್ನು ಗಳಿಸಿದೆ. ಅನೇಕ ಪ್ರತಿಭಾವಂತ ಕ್ರಿಕೆಟಿಗರನ್ನು ಈ ದೇಶಕ್ಕೆ, ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನೀಡಿದೆ. ಮೊನ್ನೆ ನಡೆದ ಆಕಸ್ಮಿಕ ಘಟನೆಯಿಂದ ಅನೇಕ ದಶಕಗಳಿಂದ ಗಳಿಸಿದ ವರ್ಚಸ್ಸನ್ನು ಅಳಿಸಿ ಹಾಕಬಾರದು. ಈ ಬಗ್ಗೆ ಎಚ್ಚರಿಕೆಯ ಕ್ರಮವನ್ನು ಸಿಎಂ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಯಾವುದೇ ಘಟನೆಯ ಬಗ್ಗೆ ತೀವ್ರವಾದ ಅನಪೇಕ್ಷಿತ ಕ್ರಮಗಳನ್ನು ಕೈಗೊಳ್ಳುವುದು ಉಚಿತವಲ್ಲ. ಆತುರದ ಕೆಲವು ಕಾರ್ಯಕ್ರಮಗಳನ್ನು ಆಡಳಿತ ಕೈಗೊಂಡಿರುವುದರ ಬಗ್ಗೆ ತಾವು ಪುನರ್ ವಿಮರ್ಶೆ ಮಾಡುವುದು ಒಳ್ಳೆಯದು. ಇದರಿಂದ ತಮ್ಮ ಆಡಳಿತಕ್ಕೆ ಕೆಟ್ಟ ಹೆಸರು ಬರುವ ಪ್ರಮೇಯವಿದೆ. ಈ ಘಟನೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಕ್ರಿಕೆಟ್ ವ್ಯವಸ್ಥೆಯ ಮೇಲೆಯೇ ಕೆಟ್ಟ ಹೆಸರು ಬಂದಿದೆ. ಆ ಕೆಟ್ಟ ಹೆಸರನ್ನು ಅಳಿಸಿ ಸರಿಯಾದ ತನಿಖೆ ನಡೆಸುವುದು ನಿಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.
ಘಟನೆ ನಂತರದ ಬೆಂಗಳೂರಿನ ಕ್ರಿಕೆಟ್ ಪಂದ್ಯಗಳನ್ನು ಬೇರಡೆಗೆ ಸ್ಥಳಾಂತರ ಮಾಡುವ ವದಂತಿ ಆರೋಗ್ಯಕರವಲ್ಲ. ಹೀಗಾಗಿ ಘಟನೆ ಬಗ್ಗೆ ಸೂಕ್ತವಾದ ಕ್ರಮಗಳನ್ನು ಕೈಗೊಂಡು, ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕೈಗೊಳ್ಳುವ ಭರವಸೆ ನೀಡಿ. ಮುಂದೆ ಪಂದ್ಯಗಳು ಸುಸೂತ್ರವಾಗಿ ನಡೆಸುವ ಭರವಸೆಗಳನ್ನು ತಾವು ಕೈಗೊಳ್ಳಬೇಕು. ಆರ್ ಸಿಬಿ ತಂಡದ ಜಯ ಕನ್ನಡಿಗರಿಗೆ ಹೆಮ್ಮೆ ತಂದಿದೆ. ಈ ರೀತಿ ಸಂಭ್ರಮಿಸುವ ಬದಲು, ಬೊಟ್ಟು ತೋರಿಸುವ ಪ್ರಕ್ರಿಯೆ ನಡೆದಿದೆ. ಇದು ಒಳ್ಳೆಯದಲ್ಲ. ಆರ್ ಸಿಬಿ ಬಗ್ಗೆ ಬಂದ ಕೆಟ್ಟ ಹೆಸರನ್ನು ಅಳಿಸಿ, ಹೆಮ್ಮೆಪಡುವ ವಾತಾವರಣವನ್ನು ಕಲ್ಪಿಸಬೇಕು. ಕೆಲವು ಕ್ರಿಕೆಟ್ ಪ್ರೇಮಿಗಳ ಉನ್ಮಾದದಿಂದ ಕೆಲವೇ ವ್ಯಕ್ತಿಗಳ ಅಜಾಗರೂಕತೆಯಿಂದ ಆದ ವಾತಾವರಣ ಅದು. ಹೀಗಾಗಿ ಆರ್ ಸಿಬಿ ಅಥವಾ ಕ್ರಿಕೆಟ್ ಜಗತ್ತಿಗೆ ಶಾಶ್ವತ ಅಪಮಾನವನ್ನು ತಪ್ಪಿಸುವುದು ಸರ್ಕಾರದ ಕರ್ತವ್ಯವವಾಗಿದೆ. ವಿವಿಧ ತನಿಖೆ ನಡೆಸುವ ಬದಲು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿ ತಕ್ಷಣ ವರದಿ ತರಿಸಬೇಕು. ಈ ಮೂಲಕ ಜನರಲ್ಲಿ ಮತ್ತು ಕ್ರಿಕೆಟ್ ಪ್ರೇಮಿಗಳಲ್ಲಿ ವಿಶ್ವಾಸವನ್ನು ಗಳಿಸುವುದು ಅನಿವಾರ್ಯವಾಗಿದೆ. ಕ್ರಿಕೆಟ್ ಪ್ರೇಮಿಗಳಿಗೆ ಸುರಕ್ಷಿತ ವಾತಾವರಣ ನಿರ್ಮಿಸುವ ದೃಷ್ಟಿಯಿಂದ ಕ್ಷಿಪ್ರ ಕಾರ್ಯಕ್ರಮ ಕೈಗೊಳ್ಳುವಿರೆಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.